Monthly Archive: September 2011

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -4

ಆ ಪರಮಾತ್ಮನು ಶುದ್ಧ, ಬುದ್ಧ, ಮುಕ್ತ ಸ್ವಭಾವನು. ಅವನೆಂದಿಗೂ ಅಶುದ್ಧನಾಗುವುದಿಲ್ಲ.

ಸಹಿ ಶುಚಿಃ ಶತಪತ್ರ ಸ ಶುಂಧ್ಯುಃ|| (ಋಕ್. ೭.೯೭.೭)

ಎಂದರೆ, [ಸ ಹಿ ಶುಚಿಃ] ಆ ಪ್ರಭುವೇ ನಿತ್ಯ ಶುದ್ಧನು. [ಶತಪತ್ರಃ] ನೂರಾರು ಬಗೆಯ ಪತನಗಳಿಂದ ದೂರವಿಟ್ಟು ರಕ್ಷಿಸುವವನು. [ಸ ಶುಂಧ್ಯುಃ] ಅವನೇ ಎಲ್ಲರನ್ನೂ ಪವಿತ್ರಗೊಳಿಸುವವನು – ಎಂದು ಋಗ್ವೇದವು ನಿರ್ದೇಶಿಸುತ್ತಲಿದೆ. ಆ ಪ್ರಭುವು ನಿತ್ಯಶುದ್ಧನೂ ಸದಾಜ್ಞಾನಿಯೂ ಆಗಿದ್ದಾನೆ. ಅವನೆಂದಿಗೂ ಭ್ರಾಂತನಾಗುವ ಪ್ರಶ್ನೆಯೇ ಇಲ್ಲ.

ಮೂರಾ ಅಮೂರ ನ ವಯಂ ಚಿಕಿತ್ವೋ ಮಹಿತ್ವಮಗ್ನೇ ತ್ವಮಂಗ ವಿತ್ಸೇ|| (ಋಕ್. ೧೦.೪.೪)

-ಎಂದರೆ [ಅಮೂರ] ಎಂದಿಗೂ ಮೋಹಕ್ಕೆ ಸಿಕ್ಕದಿರುವ [ಚಿಕಿತ್ವ] ನಿತ್ಯಜ್ಞಾನಿಯಾದ ಪ್ರಭುವೇ! [ಮೂರಾ ವಯಂ ನ] ಮೂಢರಾದ ನಮಗೆ ಏನೂ ತಿಳಿಯದು. [ಅಂಗ] ಪ್ರಿಯನೇ [ಮಹಿತ್ವಂ ತ್ವಂ ಏತ್ಸೇ] ಮಹತ್ವವನ್ನು ನೀನೇ ಬಲ್ಲೆ – ಎಂದು ಋಗ್ವೇದ ಹೇಳಿದೆ. ಅದೇ ರೀತಿ ಭಗವಂತನು ನಿತ್ಯಮುಕ್ತನು, ಅವನೆಂದಿಗೂ ಯಾವ ಬಂಧನಕ್ಕೂ ಸಿಕ್ಕನು. ನಾವು ಅಥರ್ವವೇದದಲ್ಲಿ

ಪ್ರಾಚೀದಿಗಗ್ನಿರಧಿಪತಿರಸಿತಃ|| (ಅಥರ್ವ. ೩.೨೭.೧) -

ಎಂದರೆ [ಪ್ರಾಚೀ ದಿಕ್] ಮುಂದುಗಡೆ [ಅಸಿತಃ] ಬಂಧನರಹಿತನಾದ, ನಿತ್ಯಮುಕ್ತನಾದ [ಅಗ್ನಿಃ ಅಧಿಪತಿಃ] ಜ್ಯೋತಿರ್ಮಯ ಪ್ರಭುವು ಅಧೀಶ್ವರನು – ಎಂಬ ಕಥನವಿದೆ.

     ಈರೀತಿ ವೇದೋಕ್ತ ಸಿದ್ಧಾಂತದಂತೆ ಪರಮಾತ್ಮನ ಗುಣಗಳು – ಸಚ್ಚಿದಾನಂದ; ಕರ್ಮಗಳು – ಸೃಷ್ಟಿ, ಸ್ಥಿತಿ, ಲಯ; ಸ್ವಭಾವ – ಶುದ್ಧತ್ವ, ಬುದ್ಧತ್ವ, ಮುಕ್ತತ್ವ. ಪರಮಾತ್ಮ ಸಾಕಾರ ವ್ಯಕ್ತಿಯಲ್ಲ, ನಿರಾಕಾರ ಚೇತನಶಕ್ತಿ. ಲಿಂಗ ಶರೀರದ ಲಕ್ಷಣ. ಪರಮಾತ್ಮನು ಅಶರೀರನಾದುದರಿಂದ, ಸ್ತ್ರೀ, ಪುರುಷ ಅಥವಾ ನಪುಂಸಕ ಲಿಂಗಗಳನ್ನು ಹಚ್ಚಲು ಸಾಧ್ಯವಿಲ್ಲ. ವೇದಗಳು ಈಶ್ವರೀಯವಾದರೂ, ನಮಗೆ ಮಾನವೀಯ ವಾಣಿಯಲ್ಲಿಯೇ ಬೋಧಿಸಬೇಕಾಗಿದೆ. ಅದೇ ಕಾರಣದಿಂದ ವೇದಗಳು ಪರಮಾತ್ಮನನ್ನು ಮೂರು ಲಿಂಗಗಳಲ್ಲಿಯೂ ನಿರ್ದೇಶಿಸುತ್ತವೆ.

ಸ ನೋ ಬಂಧುರ್ಜನಿತಾ ಸ ವಿಧಾತಾ|| (ಯಜು. ೩೨.೧೦)

-[ಸಃ] ಅವನೇ ನಿಯಾಮಕನು – ಎಂದು ಪುಲ್ಲಿಂಗದಲ್ಲಿ ಭಗವಂತನನ್ನು ನಿರ್ದೇಶಿಸಿದೆ.

ಸಾ ವಿಶ್ವಾಯುಃ ಸಾ ವಿಶ್ವಕರ್ಮಾ ಸಾ ವಿಶ್ವಧಾಯಾಃ|| (ಯಜು. ೧.೪)

-[ಸಾ] ಅವಳು [ವಿಶ್ವಾಯುಃ] ವಿಶ್ವದ ಪ್ರಾಣಸ್ವರೂಪಳು [ಸಾ ವಿಶ್ವಧಾಯಾಃ] ಅವಳು ವಿಶ್ವಾಧಾರಳು. ಇಲ್ಲಿ ಪರಮಾತ್ಮನನ್ನು ಸ್ತ್ರೀಲಿಂಗದಲ್ಲಿ ನಿರ್ದೇಶಿಸಲಾಗಿದೆ.

ತದೇವ ಶುಕ್ರಂ ತದ್ ಬ್ರಹ್ಮ|| (ಯಜು. ೩೨.೧)

[ತತ್ ಏವ] ಅದೇ [ಶುಕ್ರಂ] ತೇಜಸ್ವಿಯು [ತತ್] ಅದು [ಬ್ರಹ್ಮ] ಮಹತ್ತಾದುದು. ಇಲ್ಲಿ ನಿರ್ದೇಶ ನಪುಂಸಕ ಲಿಂಗದಲ್ಲಿರುವುದನ್ನು ಕಾಣುತ್ತೇವೆ. ಇದು ಕೇವಲ ಸೌಕರ್ಯದ ಪ್ರಯೋಗ. ವಸ್ತುತಃ ಪರಮಾತ್ಮನು ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ. ಮಾನವೀಯ ವಾಣಿಯಲ್ಲಿ ಹೇಳಬೇಕಾದರೆ ಯಾವುದಾದರೂ ಒಂದು ಲಿಂಗದಲ್ಲಿ ಹೇಳಲೇಬೇಕಾಗುವುದಲ್ಲವೇ?

     ಪರಮ ವೈಜ್ಞಾನಿಕವಾಗಿ ಹೇತುಗರ್ಭಿತವಾಗಿ ವೇದಗಳು ವಿಶ್ವಚೇತನವನ್ನು ವರ್ಣಿಸಿರುವುದು ಹೀಗೆ. ಇದಕ್ಕಿಂತ ಸ್ಫುಟವಾಗಿ ಭಗವಂತನನ್ನು ಯಾವ ಶಾಸ್ತ್ರವೂ ವರ್ಣಿಸುವುದಿಲ್ಲ. ಈ ಶಕ್ತಿಸ್ವರೂಪ ಪ್ರಭುವನ್ನು ಯಾವ ನಾಸ್ತಿಕನೂ ತಿರಸ್ಕರಿಸಲಾರನು. ಯಾವ ವೈಜ್ಞಾನಿಕನೂ ಅಲ್ಲ ಎನ್ನಲಾರನು. ಇಹದಲ್ಲಿ ಸುಖ-ಶಾಂತಿಗಳೂ, ಪರದಲ್ಲಿ ಆನಂದವೂ ಬೇಕಾದಲ್ಲಿ ಜೀವಾತ್ಮನು ಈ ಪರಮಾತ್ಮನ ಉಪಾಸನೆಯನ್ನೇ ಮಾಡಬೇಕು. ಯಾವ ಬಾಹ್ಯಪೂಜೆಯೂ ಪ್ರಭೂಪಾಸನೆಯಾಗಲಾರದು. ಮುಂದೆ ಉಪಾಸನಾ ವಿಷಯವನ್ನು ಚರ್ಚಿಸೋಣ.

Permanent link to this article: http://www.vedasudhe.com/257/

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ -3

ಋಗ್ವೇದದಲ್ಲಿ:-

ಯೇ ತ್ರಿಂಶತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್|

ವಿದನ್ನಹ ದ್ವಿತಾಸನನ್|| (ಋಕ್. 8.28.1)

     [ಯೇ] ಯಾವ, [ತ್ರಿಂಶತಿ ತ್ರಯಃ ಪರಃ ದೇವಾಸಃ] ಮೂವತ್ತಮೂರು ದೇವತೆಗಳು, [ಬರ್ಹಿ ಆಸದನ್] ಆಸನಾರೂಢರಾಗಿದ್ದಾರೋ [ದ್ವಿತಾಸನನ್] ಜಡರೂಪದಲ್ಲಿಯೂ ದಾನ ನೀಡುತ್ತಾ [ನಃ ವಿದನ್] ನಮಗೆ ಪ್ರಾಪ್ತರಾಗಲಿ;ಎಂದು ಓದುತ್ತೇವೆ.

ಅಥರ್ವವೇದದಲ್ಲಿ:-

ತ್ರಯಂಸ್ತ್ರಿಂಶತ್ತ್ರಿಶತಾಃ ಷಟ್ ಸಹಸ್ರಾಃ ಸರ್ವಾಂತ್ಸ ದೇವಾಂಸ್ತಪಸಾ ಪಿಪರ್ತಿ|| (ಅಥರ್ವ.11.5.2.)

ಆ ತಪಸ್ವಿಯು 6333 ದೇವತೆಗಳನ್ನು ತನ್ನ ತಪಸ್ಸಿನಿಂದ ತೃಪ್ತಿಗೊಳಿಸುತ್ತಾನೆ- ಎಂದು ಹೇಳಿದೆ.

ಯಜುರ್ವೇದದಲ್ಲಿ:-

ಅಗ್ನಿರ್ದೇವತಾ ವಾತೋ ದೇವತಾ ಸೂರ್ಯೋ ದೇವತಾ ಚಂದ್ರಮಾ ದೇವತಾ

ವಸವೋ ದೇವತಾ ರುದ್ರಾ ದೇವತಾssದಿತ್ಯಾ ದೇವತಾ ಮರುತೋ ದೇವತಾ

ವಿಶ್ವೇ ದೇವಾ ದೇವತಾ ಬೃಹಸ್ಪತಿರ್ದೇವತೇಂದ್ರೋ ದೇವತಾ ವರುಣೋ ದೇವತಾ|| (ಯಜು. 14.20)

ಎಂಬ ಮಂತ್ರದಲ್ಲಿ ಅಗ್ನಿ, ವಾಯು, ಸೂರ್ಯ, ಚಂದ್ರ, ವಸುಗಳು, ಬೃಹಸ್ಪತಿ, ಇಂದ್ರ, ವರುಣ ಅವರೆಲ್ಲಾ ದೇವತೆಗಳು ಎಂದು ಹೇಳಿದೆ. ಆದರೆ ವೇದಗಳಲ್ಲೆಲ್ಲಿಯೂ ಈ ದೇವತೆಗಳೇ ಪರಮಾತ್ಮ ಎಂದು ಹೇಳಿಲ್ಲ. ಉಪಾಸನೆಯ ಪ್ರಕರಣದಲ್ಲಿ ಈ ದೇವತೆಗಳು ಉಪಾಸ್ಯರು ಎಂದು ಅಂಗೀಕರಿಸಿಲ್ಲ. ಈ ವಿದ್ವಾಂಸರಿಗೆ ಭ್ರಾಂತಿಯುಂಟಾಗಲು, ಈ ದೇವತೆಗಳ ಹೆಸರಿನಿಂದಲೇ ಪರಮಾತ್ಮನನ್ನು ನಿರ್ದೇಶಿಸಿರುವುದೂ ಒಂದು ಕಾರಣವಾಗಿದೆ. ಆದರೂ ವೇದಗಳು ಅತಿ ಸ್ಪಷ್ಟವಾಗಿ, ನಾನಾ ಹೆಸರುಗಳಿದ್ದರೂ ಪರಮಾತ್ಮನಿರುವುದೇನೋ ಒಬ್ಬನೇ ಎಂದು ಸ್ಪಷ್ಟವಾಗಿ ಸಾರಿವೆ. ಉದಾಹರಣೆಗೆ:

ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್|

ಏಕಂ ಸದ್ ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ|| (ಋಕ್. 1.164.46)

     [ಅಗ್ನಿಂ] ತೇಜೋಮಯ ಪ್ರಭುವನ್ನು [ಇಂದ್ರಂ, ಮಿತ್ರಂ, ವರುಣಮ್] ಇಂದ್ರ, ಮಿತ್ರ, ವರುಣ ಎಂದು [ಅಹುಃ] ಕರೆಯುತ್ತಾರೆ. [ಅಥೋ] ಹಾಗೆಯೇ [ಸಃ] ಆ ಪ್ರಭುವು [ದಿವ್ಯಃ] ದಿವ್ಯನೂ [ಸುಪರ್ಣಃ} ಸುಪರ್ಣನೂ [ಗರುತ್ಮಾನ್] ಗರುತ್ಮಂತನೂ ಅಹುದು. [ಸತ್ ಏಕಮ್] ಸತ್ತತ್ವ ಇರುವುದೇನೋ ಒಂದೇ. [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು [ಬಹುಧಾ ವದಂತಿ] ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ. [ಅಗ್ನಿಂ] ಅದೇ ತೇಜೋರೂಪವನ್ನು [ಯಮಂ ಮಾತರಿಶ್ವಾನಂ ಅಹುಃ]ಯಮ, ಮಾತರಿಶ್ವಾ – ಎನ್ನುತ್ತಾರೆ.

     ಇನ್ನು ಭ್ರಾಂತಿಗವಕಾಶವೆಲ್ಲಿ? ಇದೇ ಹೆಸರುಗಳಿಂದ ಬೇರೆ ದೇವತೆಗಳನ್ನು ನಿರ್ದೇಶಿಸಿದ ಮಾತ್ರಕ್ಕೆ ಅಥವಾ ಪರಮಾತ್ಮನನ್ನು ಬೇರೆ ಬೇರೆ ಹೆಸರುಗಳಿಂದ ಕರೆದ ಮಾತ್ರಕ್ಕೆ ಒಬ್ಬ ಪರಮಾತ್ಮ ನೂರಾರು ಪರಮಾತ್ಮರುಗಳಾಗಿ ಹೋಗುವುದಿಲ್ಲ. ಇದೊಂದು ಮಂತ್ರದ ಕಡೆ ದೃಷ್ಟಿ ಹರಿಸೋಣ:-

ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|

ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ|| (ಯಜು.10.82.3)

     [ಯಃ] ಯಾವನು [ನಃ ಪಿತಾ] ನಮ್ಮ ತಂದೆಯೋ [ಜನಿತಾ] ಉತ್ಪಾದಕನೋ [ಯಃ] ಯಾವನು [ವಿಧಾತಾ] ನಿಯಾಮಕನೋ [ವಿಶ್ವಾ ಧಾಮಾನಿ ಭುವನಾನಿ ವೇದ] ಸಮಸ್ತ ನೆಲೆಗಳನ್ನೂ, ಲೋಕಗಳನ್ನೂ ಬಲ್ಲನೋ [ಯಃ] ಯಾವನು [ಏಕ ಏವ] ಒಬ್ಬನೇ ಒಬ್ಬನು [ದೇವಾನಾಂ ನಾಮಧಾ] ದೇವತೆಗಳ ಹೆಸರನ್ನೆಲ್ಲಾ ಧರಿಸುವವನಾಗಿದ್ದಾನೋ [ತಂ ಸಂಪ್ರಶ್ನಂ] ಆ ಮಹಾಜಿಜ್ಞಾಸುವಾದ ಪ್ರಭುವನ್ನು [ಅನ್ಯಾ ಭುವನಾ ಯಂತಿ] ಬೇರೆಲ್ಲಾ ಲೋಕಗಳನ್ನು ಪಡೆದುಕೊಳ್ಳುತ್ತವೆ.

ಒಬ್ಬನೇ ಒಬ್ಬ ಎಲ್ಲಾ ಎಲ್ಲಾ ದೇವತೆಗಳ ಹೆಸರನ್ನೂ ಧರಿಸುತ್ತಾನೆ – ಎಂದು ವೇದವೇ ಘೋಷಿಸುತ್ತಿರುವಾಗ, ವೇದಗಳಲ್ಲಿ ಅನೇಕೇಶ್ವರವಾದವಿದೆ ಎನ್ನುವುದಕ್ಕೆ ಅವಕಾಶವಾದರೂ ಎಲ್ಲಿದೆ? ಈ ವಾದಕ್ಕೆ ಪೂರ್ಣವಿರಾಮ ಹಾಕುವ ಈ ಕೆಳಗಿನ ಮಂತ್ರವನ್ನು ನೋಡಿರಿ:-

ನ ದ್ವಿತೀಯೋ ನ ತೃತೀಯಶ್ಚತುರ್ಥೋ ನಾಪ್ಯುಚ್ಚತೇ|

ನ ಪಂಚಮೋ ನ ಷಷ್ಠಃ ಸಪ್ತಮೋ ನಾಪ್ಯುಚ್ಚತೇ|

ನಾಷ್ಟಮೋ ನಾ ನವಮೋ ದಶಮೋ ನಾಪ್ಯುಚ್ಚತೇ|

ತಮಿದಂ ನಿಗತಂ ಸಹಃ ಸ ಏಷ ಏಕ ಏಕವೃದೇಕ ಏವ|| (ಅಥರ್ವ.13.4.16-18,20)

[ನ ದ್ವಿತೀಯಃ] ಎರಡನೆಯ ಪರಮಾತ್ಮನಿಲ್ಲ. [ನ ತೃತೀಯಃ] ಮೂರನೆಯವನೂ ಇಲ್ಲ. [ಚತುರ್ಥಃ ಅಪಿ ನ ಉಚ್ಯತೇ] ನಾಲ್ಜನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಪಂಚಮಃ] ಐದನೆಯವನಿಲ್ಲ. [ನ ಷಷ್ಠಃ] ಆರನೆಯವನಿಲ್ಲ. [ಸಪ್ತಮಃ ಅಪಿ ನ ಉಚ್ಯತೇ] ಏಳನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಅಷ್ಟಮಃ] ಎಂಟನೆಯವನಿಲ್ಲ. [ನ ನವಮಃ] ಒಂಬತ್ತನೆಯವನಿಲ್ಲ. [ದಶಮಃ ಅಪಿ ನ ಉಚ್ಯತೇ] ಹತ್ತನೆಯವನ ನಿರ್ದೇಶನವೂ ಇಲ್ಲ. [ಇದಂ ಸಹಃ] ಈ ಶಕ್ತಿ [ತಂ ನಿಗತಮ್] ಅವನಲ್ಲಿಯೇ ಅಡಕವಾಗಿದೆ. [ಸಃ ಏಷಃ] ಆ, ಈ ಪ್ರಭುವು [ಏಕಃ] ಒಬ್ಬನೇ ಆಗಿದ್ದಾನೆ. [ಏಕವೃತ್] ಒಬ್ಬನೇ ವ್ಯಾಪಕನಾಗಿದ್ದಾನೆ. [ಏಕ ಏವ] ಇರುವುದು ಒಬ್ಬನೇ ಒಬ್ಬನು.

ಈ ರೀತಿ ಎಲ್ಲಾ ಸಂದೇಹಗಳು ಅಡಗಿಹೋಗುತ್ತವೆ. ಭಗವಂತನಿರುವುದು ಒಬ್ಬನೇ. ಅವನು ನಿರಾಕಾರ-ನಿರ್ವಿಕಾರನು, ಸರ್ವಜ್ಞ-ಸರ್ವವ್ಯಾಪಕ-ಸರ್ವದ್ರಷ್ಟನು. ಅವನು ಸದಾ ಅಶರೀರನೇ. ಅವನು ಶಕ್ತಿರೂಪನು; ವ್ಯಕ್ತಿರೂಪನಲ್ಲ. ಅವನು ಮೇಲಿಂದ ಕೆಳಗಿಳಿದು ಬರುವನು, ಅವತಾರವೆತ್ತುವನು – ಎನ್ನುವುದು ಕೇವಲ ಭ್ರಾಂತಿ ಮಾತ್ರ. ಅವನೇ ಸೃಷ್ಟಿಕರ್ತನು.

ಋಗ್ವೇದವು:

ವಿಶ್ವಕರ್ಮಾ ವಿಮನಾ ಅದ್ವಿಹಾಯಾ|| (ಋಕ್. 10.82.2)

ಮನೋಬಂದನವಿಲ್ಲದ, ಸರ್ವವ್ಯಾಪಕ ಪ್ರಭುವೇ ಸೃಷ್ಟಕರ್ತನು ಎನ್ನುತ್ತಲಿದೆ. ಅವನೇ ಸ್ಥಿತಿಗೂ, ಪಾಲನೆಗೂ ಕಾರಣನು.

ಯಜುರ್ವೇದವು:

ಯೇನ ದ್ಯೌರುಗ್ರಾ ಪೃಥಿವೀ ಚ ಧೃಢಾ ಯೇನ ಸ್ವ ಸ್ತಭಿತಂ ಯೇನ ನಾಕಃ|

ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು. 32.6)

ಎನ್ನುತ್ತಲಿದೆ.

[ಯೇನ] ಯಾವನಿಂದ [ಉಗ್ರಾ ದ್ಯೌಃ ಪೃಥವೀ ಚ ಧೃಢಾ] ಉಗ್ರವಾದ ದ್ಯುಲೋಕವೂ, ಪೃಥಿವಿಯೂ ಧೃಢವಾಗಿದೆಯೋ [ಯೇನ ಸ್ವ ಸ್ತಭಿತಂ] ಯಾವನಿಂದ ಆನಂದಮಯ ಮೋಕ್ಷವು ಧೃಢೀಕೃತವಾಗಿದೆಯೋ [ಯೇನ ನಾಕಃ] ಯಾವನಿಂದ ಸುಖಮಯ ಇರುವಿಕೆ ಧೃಢವಾಗಿದೆಯೋ [ಯಃ ಅಂತರಿಕ್ಷೇ ರಜಸಃ] ಯಾವನು ಅಂತರಿಕ್ಷದಲ್ಲಿಯೂ ಲೋಕ ರಚಿಸಿ [ವಿಮಾನಃ] ವಿಶೇಷ ಮಾನಾರ್ಹನಾಗಿದ್ದಾನೋ [ಕಸ್ಮೈ ದೇವಾಃ] ಆ ಆನಂದಮಯ ದೇವನಿಗೆ [ಹವಿಷಾ ವಿಧೇಮ] ಸಚ್ಚಾರಿತ್ರದಿಂದ ವಿನೀತರಾಗೋಣ- ಎಂದು ಹೇಳುತ್ತಲಿದೆ. ಅವನೇ ಪ್ರಳಯ ಕರ್ತೃವೂ ಆಗಿದ್ದಾನೆ.

ಋಗ್ವೇದವು :

ಯ ಏಕ ಇಚ್ಚ್ಯಾವಯತಿ ಪ್ರ ಭೂಮಾ ರಾಜಾ ಕೃಷ್ಟೀನಾಂ ಪುರುಹೂತ ಇಂದ್ರಃ|| (ಋಕ್. 4.17.5)

[ಯಃ ಏಕ ಇತ್] ಯಾವನೊಬ್ಬನೇ [ಪ್ರ ಭೂಮಾ] ಈ ವಿಸ್ತೃತ ಬ್ರಹ್ಮಾಂಡವನ್ನು [ಚ್ಯಾವಯತಿ] ಲಯಗೊಳಿಸುತ್ತಾನೋ, ಅವನು [ಕೃಷ್ಟೀನಾಂ ರಾಜಾ] ಪ್ರಜೆಗಳೆಲ್ಲರಿಗೂ ರಾಜನಾದ [ಪುರುಹೂತಃ ಇಂದ್ರಃ] ಬಹುಸ್ತುತ್ಯನಾದ ಸರ್ವಶಕ್ತಿಮಾನ್ ಪ್ರಭುವಾಗಿದ್ದಾನೆ - ಎಂದು ಹೇಳುತ್ತಲಿದೆ.

     ವೇದಗಳ ಪ್ರಕಾರ ಅವನು (ಪರಮಾತ್ಮನು) ಸಚ್ಚಿದಾನಂದಸ್ವರೂಪನಾಗಿದ್ದಾನೆ. ಸತ್ ಎಂದರೆ ಸತ್ಯಸ್ವರೂಪನು. ಋಗ್ವೇದ;

ಸೈನಂ ಸಶ್ಚದ್ ದೇವೋ ದೇವಂ ಸತ್ಯಮಿಂದ್ರಂ ಸತ್ಯ ಇಂದುಃ|| (ಋಕ್. ೨.೨೨.೧)

-ಎಂದರೆ, [ಸ ದೇವಃ ಸತ್ಯ ಇಂದುಃ] ಆ ಉದಾರನಾದ ಸತ್ಯನಾದ ಜೀವಾತ್ಮನು [ಏನಂ ದೇವಂ ಸತ್ಯಂ ಇಂದ್ರಂ] ಈ ದೇವನಾದ ಸತ್ಯನಾದ ಸರ್ವಶಕ್ತಿಮಾನ್ ಪ್ರಭುವನ್ನು [ಸಶ್ಚತ್] ಸೇರುತ್ತಾನೆ - ಎಂದು ವರ್ಣಿಸಿದೆ. ಆ ಪರಮಾತ್ಮನು ಚಿತ್ ಎಂದರೆ ಚೇತನನಾಗಿದ್ದಾನೆ.

ಋಗ್ವೇದ,

ಹೋತಾಜನಿಷ್ಟ ಚೇತನಃ ಪಿತಾ ಪಿತೃಭ್ಯ ಊತಯೇ|| (ಋಕ್. ೨.೫.೧.) -

ಎಂದರೆ [ಚೇತನಾ ಹೋತಾ ಪಿತಾ] ಚೇತನನೂ, ಸರ್ವಧಾತೃವೂ, ಎಲ್ಲರ ತಂದೆಯೂ ಆದ ಭಗವಂತನು [ಪಿತೃಭ್ಯ ಊತಯೇ] ಪಾಲಕರಾದ ಲೌಕಿಕ ಪಿತೃಗಳ ರಕ್ಷಣೆಗೆ [ಅಜನಿಷ್ಟ] ಪ್ರಸಿದ್ಧನಾಗಿದ್ದಾನೆ - ಎಂದು ಸಾರಿದೆ. ಅದೇ ರೀತಿ ಪರಮಾತ್ಮ, ಆನಂದಸ್ವರೂಪನೂ ಆಗಿದ್ದಾನೆ.

ನಾವು ಅಥರ್ವವೇದದಲ್ಲಿ -

ಸ್ವರ್ಯಸ್ಯ ಚ ಕೇವಲಂ ತಸ್ಮೈ ಜ್ಯೇಷ್ಟಾಯ ಬ್ರಹ್ಮಣೇ ನಮಃ|| (ಅಥರ್ವ. ೧೦.೮.೧)

ಎಂದರೆ [ಯಸ್ಯ ಸ್ವಃ ಕೇವಲಂ] ಯಾವನ ಆನಂದವು ಪರಿಶುದ್ಧವಾಗಿದೆಯೋ, [ತಸ್ಮೈ ಜ್ಯೇಷ್ಟಾಯ ಬ್ರಹ್ಮಣೇ ನಮಃ] ಆ ಜ್ಯೇಷ್ಟ ಪ್ರಭುವಿಗೆ ನಮಸ್ಕಾರ -

ಎಂದು ಓದುತ್ತೇವೆ.

Permanent link to this article: http://www.vedasudhe.com/254/

ವೇದೋಕ್ತ ಜೀವನ ಪಥ: ಭಗವತ್ ಸ್ವರೂಪ – 2

ಇನ್ನೊಂದು ಮಂತ್ರವನ್ನು ನೋಡೋಣ ಬನ್ನಿ:-

ಸ  ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಹಾಪವಿದ್ಧಮ್|

ಕವಿರ್ಮನೀಷೀ ಪರಿಭೂಃ ಸ್ವಯಂಭೂರ್ಯಾಥಾತಥ್ಯತೋರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ|| (ಯಜು.40.8)

[ಸಃ] ಆ ಚೇತನ ತತ್ವ, [ಪರಿ ಅಗಾತ್] ಎಲ್ಲಕ್ಕಿಂತ ಮೇಲಿದೆ, ಸರ್ವೋತ್ಕೃಷ್ಟವಾಗಿದೆ. [ಶುಕ್ರ] ಜ್ಯೋತಿರ್ಮಯವಾಗಿದೆ. [ಅಕಾಯಮ್] ವ್ರಣರಹಿತವಾಗಿದೆ. [ಅಸ್ಸಾವಿರಮ್] ನರನಾಡಿಗಳ ಬಂಧನವಿಲ್ಲದುದಾಗಿದೆ. [ಶುದ್ಧಮ್] ಪವಿತ್ರವಾಗಿದೆ. [ಅಪಾಪವಿದ್ಧಮ್] ಪಾಪದಿಂದ ಛೇದಿಸಲ್ಪಡದುದಾಗಿದೆ. [ಕವಿಃ] ಸರ್ವಜ್ಞ, ಸರ್ವದ್ರಷ್ಟುವಾಗಿದೆ. [ಮನೀಷೀ] ವಿಚಾರಶೀಲವೂ, ಮನಃಪ್ರೇರಕವೂ ಆಗಿದೆ. [ಪರಿಭೂಃ} ಸರ್ವಶ್ರೇಷ್ಠ, ಸರ್ವಜ್ಯೇಷ್ಠವಾಗಿದೆ. [ಸ್ವಯಂಭೂಃ] ಸ್ವತಃ ಇರತಕ್ಕ, ಅನುತ್ಪನ್ನವಾದ ಅನಾದಿ ತತ್ವವಾಗಿದೆ ಅದು. [ಶಾಶ್ವತೀಭ್ಯಃ ಸಮಾಭ್ಯಃ] ತನ್ನ ಶಾಶ್ವತ ಪ್ರಜೆಗಳಾದ ಜೀವಾತ್ಮರಿಗೆ, [ಯಾಥಾ ತಥ್ಯತಃ] ಹೇಗೆ ಕೊಡಬೇಕೋ ಹಾಗೆ, [ಅರ್ಥಾನ್] ಜೀವಿಕಾ ಸಾಧನಗಳನ್ನೂ, ವಿಷಯಗಳ ಜ್ಞಾನವನ್ನೂ, [ವಿ ಅದಧಾತ್] ವಿಶಿಷ್ಟ ರೀತಿಯಲ್ಲಿ, ವಿವಿಧ ಪ್ರಕಾರದಿಂದ ದಯಪಾಲಿಸುತ್ತಿದೆ.

     ಭಗವಂತನ ಅತ್ಯಂತ ವೈಜ್ಞಾನಿಕವಾದ ಈ ಭವ್ಯಸ್ವರೂಪದ ಚಿತ್ರಣವನ್ನು ನೋಡಿ, ನಾಸ್ತಿಕರೂ ಕೂಡ “ಈ ದೇವರನ್ನಲ್ಲ ನಾವು ಖಂಡಿಸುವುದು” ಎಂದುಕೊಳ್ಳಬೇಕು. ವೈಜ್ಞಾನಿಕರು “ಈ ದೇವರನ್ನಲ್ಲ ನಾವು ಕೊಂದುದು” ಎಂದುಕೊಳ್ಳಬೇಕು! ಈ ಮಹಾನ್ ವಿಶ್ವಚೇತನ ಕೇವಲ ಸರ್ವವ್ಯಾಪಕವಲ್ಲ; ಅದು ಸರ್ವಜ್ಞವೂ ಅಹುದು; ಸರ್ವದ್ರಷ್ಟುವೂ ಅಹುದು, ಅತ್ಯಂತ ಪವಿತ್ರವಾದ ಆ ಪತಿತಪಾವನ ತತ್ವ ಸ್ವತಃ ಸತ್ಯ ಸಂಕಲ್ಪಗಳಿಂದ ಕೂಡಿ ನಿರ್ಮಲಾಂತಃಕರಣ ಚಿತ್ರಗಳಲ್ಲಿ ಪ್ರೇರಣೆ ತುಂಬಿಸುವ ಸದ್ವಸ್ತುವಾಗಿದೆ. ಸರ್ವಶ್ರೇಷ್ಠ. ಸರ್ವಜ್ಯೇಷ್ಠವಾದ ಆ ದಿವ್ಯಚೇತನ ಬೇರೆಯವರಿಂದ ತನ್ನ ಅಸ್ತಿತ್ವವನ್ನು ಎರವು ತೆಗೆದುಕೊಳ್ಳುವುದಿಲ್ಲ. ಯಾರು ಒಪ್ಪಲಿ, ಬಿಡಲಿ, ಅದಂತೂ ಇದ್ದೇ ಇರುತ್ತದೆ. 

ಋಗ್ವೇದ ಸಾರುತ್ತಲಿದೆ:-

 

ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|

 

ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ||  (ಋಕ್.10.81.3.)

 

     [ವಿಶ್ವತಃ ಚಕ್ಷುಃ] ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಸರ್ವದ್ರಷ್ಟನಾದ [ಉತ] ಮತ್ತು [ವಿಶ್ವತಃ ಮುಖಃ] ಎಲ್ಲೆಡೆಯಲ್ಲಿಯೂ ಮುಖವನ್ನುಳ್ಳ, ಎಲ್ಲೆಡೆಯೂ ತಿರುಗುವ, [ವಿಶ್ವತಃ ಬಾಹುಃ] ಎಲ್ಲೆಡೆಯಲ್ಲೂ ಬಾಹುಗಳನ್ನುಳ್ಳ, ಸರ್ವಕರ್ತೃವಾದ, [ಉತ] ಅದೇ ರೀತಿ [ವಿಶ್ವತಃ ಪಾತ್] ಎಲ್ಲೆಡೆಯಲ್ಲೂ ಪಾದಗಳನ್ನುಳ್ಳ, ಸರ್ವಗತನಾದ, [ಏಕದೇವಃ] ಒಬ್ಬ ದೇವನು [ದ್ಯಾವಾ ಭೂಮಿ ಜನಯನ್] ದ್ಯುಲೋಕ, ಪೃಥಿವೀ ಲೋಕಗಳನ್ನು ರಚಿಸುತ್ತಾ [ಬಾಹುಭ್ಯಾಂ ಸಮ್] ತನ್ನ ಸೃಜನ, ಪೋಷಣ ಸಾಮರ್ಥ್ಯಗಳಿಂದಲೂ [ಪತತ್ರೈ ಸಮ್] ಗತಿಶೀಲ ಚೇತನರಾದ ಜೀವಾತ್ಮರುಗಳ ಮೂಲಕವೂ [ಧಮತಿ] ಪ್ರಾಣವನ್ನು ಊದುತ್ತಿದ್ದಾನೆ.

 

     ಎಂತಹ ಸೊಗಸಾಗಿದೆ, ಈ ವರ್ಣನೆ! ಕಣ್ಣು, ಮುಖ, ಬಾಹು, ಪಾದ ಮೊದಲಾದ ಶಬ್ದಗಳನ್ನು ಕಂಡು ಭಗವಂತ ಸಾಕಾರನೋ ಎಂಬ ಭ್ರಾಂತಿಗೆ ಬಲಿಬೀಳುವುದು ಬೇಡ. ಭಗವಂತ ಸರ್ವವ್ಯಾಪಕನಾದ ಕಾರಣ, ಸರ್ವಥಾ ನಿರಾಕಾರ ಎಂದು ಮೊದಲೇ ಓದಿದ್ದೇವೆ. ಕಣ್ಣು, ಮುಖ, ಕೈಕಾಲು ಇಲ್ಲದಿದ್ದರೂ, ಭಗವಂತ ಅಂಗೋಪಾಂಗಗಳು ಮಾಡಬಹುದಾದ ಕೆಲಸವನ್ನೆಲ್ಲಾ ಅಶರೀರನಾಗಿಯೇ ಮಾಡುತ್ತಿದ್ದಾನೆ ಎನ್ನುವುದೇ ಈ ಮಂತ್ರದ ಭಾವನೆ. ಶಬ್ದಾರ್ಥವನ್ನೇ ಹಿಡಿದು ಹೊರಟರೆ ಎಲ್ಲೆಡೆಯೂ ಕಣ್ಣು, ಎಲ್ಲೆಡೆಯೂ ಮುಖ, ಎಲ್ಲೆಡೆಯೂ ಕೈ, ಎಲ್ಲೆಡೆಯೂ ಕಾಲು ಇರುವ ಎದೆ, ಬೆನ್ನು, ಹೊಟ್ಟೆ ಹಾಗೂ ಕಿವಿಯೇ ಇಲ್ಲದ, ಜಗತ್ತಿನ ಯಾವ ದೇವಸ್ಥಾನದಲ್ಲಿಯೂ, ಯಾವ ಕಲಾಮಂದಿರದಲ್ಲಿಯೂ ಕಾಣಿಸದ ವಿಚಿತ್ರ ಮೂರ್ತಿಯೊಂದನ್ನು ಊಹಿಸಿಕೊಳ್ಳಬೇಕಾದೀತು. ಆದರೆ ವೇದಗಳ ಭಾಷಾಶೈಲಿಯನ್ನು ಬಲ್ಲ ಯಾರೂ ಮೋಸ ಹೋಗಲಾರರು. ಸರ್ವತ್ರ ವ್ಯಾಪಕನಾದ, ಸರ್ವಕರ್ತೃ, ಸರ್ವಪಾತ್ರವಾದ ಭಗವಂತನಿರುವುದು ಒಬ್ಬನೇ. ಈ ಮಂತ್ರದಲ್ಲಿಯೂ “ಏಕ ದೇವಃ” ಎಂಬ ಶಬ್ದಗಳಿವೆ. ಮೊದಲು ಉದ್ಗರಿಸಿದ ಯಜುರ್ವೇದ ಮಂತ್ರವೊಂದರಲ್ಲಿಯೂ ನಾವು “ಏಕಮ್” ಎಂಬ ಶಬ್ದವನ್ನು ಕಾಣುತ್ತೇವೆ. 

ಋಗ್ವೇದ ಒಂದು ಕಡೆ ಹೇಳುತ್ತಲಿದೆ:

 

ಯ ಏಕ ಇತ್ ತಮು ಷ್ಟುಹಿ ಕೃಷ್ಟೀನಾಂ ವಿಚರ್ಷಣಿಃ|

 

ಪತಿರ್ಜಜ್ಞೇ ವೃಷಕ್ರತುಃ||  (ಋಕ್. 6.45.16)

 

     [ಯಃ] ಯಾವ, [ಕೃಷ್ಟೀನಾಮ್] ಪ್ರಜಾಮಾತ್ರರ, [ವಿಚರ್ಷಣಿಃ] ನಿರೀಕ್ಷಕನಾಗಿ, [ಏಕ ಇತ್] ಒಬ್ಬನೇ ಇದ್ದಾನೋ, [ತಂ ಉ ಸ್ತುಹಿ] ಅವನನ್ನು ಮಾತ್ರ ಸ್ತುತಿಸು. [ವೃಷಕ್ರತುಃ] ಪ್ರಬಲ ಜ್ಞಾತಿಯು, ಅದ್ಭುತ ಕರ್ತೃವೂ, [ಪತಿ] ಎಲ್ಲರ ಸ್ವಾಮಿಯೂ, ಪಾಲಕನೂ ಆಗಿ [ಜಜ್ಞೇ] ಅವನು ಪ್ರಸಿದ್ಧನಾಗಿದ್ದಾನೆ.

 

     ಇಂತಹ ಸ್ಫುಟವಾದ ಪ್ರಮಾಣಗಳಿದ್ದರೂ ಕೂಡ, ಅನೇಕ ಪಾಶ್ಚಾತ್ಯ ವಿದ್ವಾಂಸರೂ, “ಗೌರಾಂಗ ಪ್ರಭುಗಳು ಹೇಳಿರುವುದೇ ಸತ್ಯ” ಎಂದು ನಂಬುವ ಕೆಲವು ಭಾರತೀಯ ವಿದ್ವಾಂಸರೂ ಸಹ “ವೇದಗಳಲ್ಲಿ ಅನೇಕೇಶ್ವರವಾದವಿದೆ, ಆರ್ಯರು ಇಂದ್ರ, ಅಗ್ನಿ, ವರುಣ ಮೊದಲಾದ ಅದೆಷ್ಟೋ ದೇವರನ್ನು ಪೂಜಿಸುತ್ತಿದ್ದರು. ‘ದೇವರೊಬ್ಬನೇ’ ಎಂಬ ಸಿದ್ಧಾಂತ ಇತ್ತೀಚಿನದು. ಅದು ವೈದಿಕ ಋಷಿಮುನಿಗಳಿಗೆ ಗೊತ್ತಿರಲಿಲ್ಲ” ಎಂದು ವಾದಿಸುತ್ತಾರೆ. ವೇದಗಳಲ್ಲಿ ಒಬ್ಬನೇ ಭಗವಂತನನ್ನು ನಾನಾ ಹೆಸರುಗಳಿಂದ ಸಂಬೋಧಿಸಿರುವುದನ್ನು ಕಂಡು ಅವರು ಮುಗ್ಗರಿಸಿದ್ದಾರೆ. ವೇದಗಳಲ್ಲಿ ಅನೇಕ ದೇವತಾವಾದವಿದೆ ಎಂಬುದನ್ನಂತೂ ಯಾರೂ ತಿರಸ್ಕರಿಸಲಾರರು. ಪದಾರ್ಥ ಜಡವಾಗಲಿ, ಚೇತನವಾಗಲಿ, ಯಾವುದಾದರೊಂದು ದಿವ್ಯಶಕ್ತಿ ಅದರಲ್ಲಿದ್ದರೆ, ವೇದಗಳು ಅದನ್ನು ‘ದೇವತೆ’ ಅಥವಾ ‘ದೇವ’ ಎಂದು ನಿರ್ದೇಶಿಸುತ್ತವೆ.

 

 

 

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ad%e0%b2%97%e0%b2%b5%e0%b2%a4%e0%b3%8d-%e0%b2%b8%e0%b3%8d%e0%b2%b5/

ಸಾಧನಾ ಪಂಚಕಮ್-ಭಾಗ -4

ತಿಪಟೂರಿನ ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯರು ಐದು ದಿನಗಳ ಒಂದು ಉಪನ್ಯಾಸಮಾಲೆಯನ್ನು ಹಾಸನದಲ್ಲಿ ನಡೆಸಿಕೊಟ್ಟರು. ವಿಷಯ: ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾ ಪಂಚಕಮ್. ಇದರಲ್ಲಿ ಐದು ಶ್ಲೋಕಗಳು. ಒಂದೊಂದರಲ್ಲೂ ಎಂಟೆಂಟು ಸೂತ್ರಗಳು.ಸಾಧನೆಯ ಪಥದಲ್ಲಿರುವವನಿಗೆ ಬಲು ಇಷ್ಟವಾಗುತ್ತದೆ.ಒಂದೊಂದೂ ಸೂತ್ರವೂ ಸಾಧಕನಿಗೆ ಒಂದೊಂದು ಮೆಟ್ಟಿಲು. ಒಂದೊಂದು ಮೆಟ್ಟಿಲನ್ನೂ ಮನಮುಟ್ಟುವಂತೆ ವಿವರಿಸಿದ ರೀತಿಯು ಅದ್ಭುತ. ಉಪನ್ಯಾಸವನ್ನು ನಾನು ಕೇಳಿದ ಮೇಲೆ ವೇದಸುಧೆಯ ಅಭಿಮಾನಿಗಳಿಗೂ ಕೇಳಿಸಬೇಡವೇ! ಅದಕ್ಕಾಗಿ ಈ ಪ್ರಯತ್ನ.ಒಂದೊಂದು ಸೂತ್ರವನ್ನೂ ಇಲ್ಲಿ ಪ್ರಕಟಿಸಲಾಗಿದೆ. ಅದರ ವಿವರಣೆಯನ್ನು ಶ್ರೀ ಸುಧರ್ಮ ಚೈತನ್ಯರ ಕಂಠದಿಂದಲೇ ಕೇಳಿ. ನಿತ್ಯವೂ ಒಂದೆರಡರಂತೆ ನಲವತ್ತು ಸೂತ್ರಗಳನ್ನೂ ಪ್ರಕಟಿಸಲಾಗುವುದು.

ಸಾಧನಾ ಪಂಚಕಂ -ಮೆಟ್ಟಲು- 14+ 15 + 16
14. ಪ್ರತಿದಿನಂ ತತ್ಪಾದುಕಾ ಸೇವ್ಯತಾಮ್
ಭಾವಾರ್ಥ: ನಿತ್ಯವೂ ಸದ್ಗುರುಗಳ ಪಾದುಕೆಗಳನ್ನು ಆರಾಧಿಸು
15. ಬ್ರಹ್ಮೈಕಾಕ್ಷರಮರ್ಥ್ಯತಾಮ್
ಭಾವಾರ್ಥ: ಬ್ರಹ್ಮವನ್ನು ಸೂಚಿಸುವ ಏಕಾಕ್ಷರವಾದ ಓಂ ಕಾರವನ್ನು ಧ್ಯಾನಿಸು
16. ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್
ಭಾವಾರ್ಥ: ಉಪನಿಷತ್ತಿನ ಮಹಾವಾಕ್ಯಗಳನ್ನು ಕುರಿತು ಗಂಭೀರವಾಗಿ ಮನನ ಮಾಡು

Permanent link to this article: http://www.vedasudhe.com/%e0%b2%b8%e0%b2%be%e0%b2%a7%e0%b2%a8%e0%b2%be-%e0%b2%aa%e0%b2%82%e0%b2%9a%e0%b2%95%e0%b2%ae%e0%b3%8d-%e0%b2%ad%e0%b2%be%e0%b2%97-4/

ವೇದೋಕ್ತ ಜೀವನ ಪಥ – ಭಗವತ್ ಸ್ವರೂಪ -1

ಸನ್ಮಿತ್ರರೇ,
ಪಂಡಿತ ಸುಧಾಕರ ಚತುರ್ವೇದಿಯವರ ವಿಚಾರಗಳನ್ನು ‘ವೇದೋಕ್ತ ಜೀವನ ಪಥ’ದಲ್ಲಿ ನಿಮ್ಮ ಮುಂದಿಡಲಾಗುತ್ತಿರುವುದು ನಿಮ್ಮ ಮೆಚ್ಚುಗೆ ಗಳಿಸಿದೆ.ಅವರು 1897ರ ರಾಮನವಮಿಯಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿ, 13ನೆಯ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ನಿಜ ಅರ್ಥದಲ್ಲಿ ‘ಚತುರ್ವೇದಿ’ಯಾದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ಸ್ವಾತಂತ್ರ್ಯಚಳುವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿ 13 ವರ್ಷಗಳಿಗೂ ಹೆಚ್ಚುಕಾಲ ಸೆರೆವಾಸ ಅನುಭವಿಸಿದವರು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಾಕ್ಷಿಯಾಗಿದ್ದವರು. ಅವರು ‘ವಿಜಯ ಕರ್ನಾಟಕ’ ಪತ್ರಿಕೆಗೆ ಸಂದರ್ಶನದಲ್ಲಿ ಹೇಳಿದ್ದು: “ನಾನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೋತ್ಸಾಹ ಸ್ವಾಮಿ ಶ್ರದ್ಧಾನಂದರದಾದರೂ ಆಂತರಿಕವಾಗಿ ವೇದಗಳೇ ಪ್ರೇರಣೆ. ‘ಅಧೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್’ – ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಕರೆತಂದಿತು. ಭಾರತೀಯರಿಗೆ ಗೌರವ ಕೊಡದೆ ಅವರು ಕೀಳಾಗಿ ಕಾಣುತ್ತಿದ್ದುದು ನಾವೆಲ್ಲಾ ಚಳುವಳಿಗೆ ಧುಮುಕಲು ಪ್ರೇರಣೆಯಾಯಿತು”. ಇನ್ನುಮುಂದೆ ಭಗವತ್ ಸ್ವರೂಪ ಕುರಿತು ಈಗ 114 ವರ್ಷಗಳ ಈ ಶತಾಯುಷಿ ಏನು ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದಿಡಲಾಗುವುದು. ಎಂದಿನಂತೆ ನಿಮ್ಮ ಅನಿಸಿಕೆ, ಟೀಕೆ, ಟಿಪ್ಪಣಿಗಳನ್ನು ವ್ಯಕ್ತಪಡಿಸಲು ಕೋರುವೆ.

ಭಗವತ್ ಸ್ವರೂಪ -1
ನಾಸ್ತಿಕರಲ್ಲದ ಸರ್ವ ಮತೀಯರೂ ಒಂದಿಲ್ಲೊಂದು ರೂಪದಲ್ಲಿ ತಮಗಿಂತ ದೊಡ್ಡದಾದ ಯಾವುದೋ ಒಂದು ತತ್ವವಿದೆ, ಅದೇ ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣವಾಗಿದೆ – ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅಂತಹ ಸಾಂಪ್ರದಾಯಿಕರಲ್ಲಿ ಬಹುಮಂದಿ, ಆ ಶಕ್ತಿಯನ್ನು ವ್ಯಕ್ತಿಯ ರೂಪದಲ್ಲೇ ಭಾವಿಸಿ, ಅದಕ್ಕೆ ಯಾವುದೋ ಕಾಲ್ಪನಿಕ ರೂಪವಿತ್ತು, ಅದಾವುದೋ ಬೇರೆ ಲೋಕದಲ್ಲಿ ವಾಸ ಮಾಡಿಕೊಂಡಿದೆ ಎಂದು ನಂಬುತ್ತಾರೆ. ಒಂದು ಮತದವರು ಆರಾಧಿಸುವ ಆ ಶಕ್ತಿಯನ್ನು ಬೇರೆ ಮತದವರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಎಷ್ಟು ಸಂಪ್ರದಾಯಗಳಿವೆಯೋ ಅಷ್ಟು ದೇವರುಗಳ ಸೃಷ್ಟಿಯಾಗಿ ಹೋಗಿದೆ. ಅದೇಕೆ, ಒಂದೊಂದು ಸಂಪ್ರದಾಯಕ್ಕೂ ಎಷ್ಟೋ ದೇವರುಗಳಿವೆ!

ಆದರೆ ಈ ದೇವರುಗಳೆಲ್ಲಾ ಕೇವಲ ಕಾಲ್ಪನಿಕ ವ್ಯಕ್ತಿಗಳೇ. ಇಂತಹ ದೇವರುಗಳು ಹಿಂದೆ ಎಂದೂ ಇರಲಿಲ್ಲ; ಈಗ ಇಲ್ಲ; ಮುಂದಕ್ಕೂ ಇರುವುದಿಲ್ಲ. ಒಂದು ವೇಳೆ ಇದ್ದರೆ, ಭೌತಿಕ ವಿಜ್ಞಾನ ಆ ದೇವರುಗಳನ್ನೆಲ್ಲಾ ಶೂನ್ಯ ವಿಲೀನವಾಗಿ ಮಾಡಿಬಿಟ್ಟಿದೆ. ಈ ವಿಷಯದಲ್ಲಿ ವೇದಗಳು ಏನೆನ್ನುತ್ತವೆ? ನಾವು ಹಿಂದೆ ಹೇಳಿರುವಂತೆ ವೇದಗಳು ಮಾನವ ಕಲ್ಪಿತ ಶಾಸ್ತ್ರಗಳಲ್ಲ; ಭಗವಂತನಿಂದಲೇ ಸೃಷ್ಟಿಯ ಆದಿಯಲ್ಲಿ ಸರ್ವರ ಕಲ್ಯಾಣಕ್ಕಾಗಿ ಉಪದೇಶಿಸಲ್ಪಟ್ಟ ಬುದ್ಧಿಸಂಗತವಾದ ಹಾಗೂ ವೈಜ್ಙಾನಿಕವಾದ ಸತ್ಯಶಾಸ್ತ್ರಗಳು. ಅವುಗಳ ಉಪದೇಶ ಪೂರ್ಣತಃ ನಿರ್ದೋಷ ಹಾಗೂ ಬುದ್ಧಿಯುಕ್ತ. ಮಾನವ, ಭಗವಂತನನ್ನು ತನ್ನ ರೂಪದಲ್ಲೇ, ಕೆಲವು ವೇಳೆ ತನಗಿಂತ ಶ್ರೇಷ್ಠ ಎಂದು ತೋರಿಸುವುದಕ್ಕಾಗಿ, ತನಗಿಂತ ಅದ್ಭುತ ರೂಪದಲ್ಲಿ ಊಹಿಸಿಕೊಳ್ಳುತ್ತಾನೆ. ಪ್ರಾಯಶಃ ಆಸ್ತಿಕರೆನ್ನಿಸಿಕೊಳ್ಳುವವರಲ್ಲಿ ಅಧಿಕಾಂಶ ಜನರು ಭಗವಂತನನ್ನು ಸಾಕಾರರೂಪದಲ್ಲಿಯೇ ಅಂಗೀಕರಿಸುತ್ತಾರೆ. ಆದರೆ, ಸರ್ವಪ್ರಥಮ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಆಕಾರ, ಅದು ಯಾವುದೇ ಆಗಿರಲಿ, ಸಂಯೋಗಜನ್ಯವಾದ ಪ್ರಾಕೃತಿಕ ಅಥವಾ ಭೌತಿಕ ವಸ್ತುಗಳಿಗೆ ಅನ್ವಯಿಸುವುದೇ ಹೊರತು, ಆಧ್ಯಾತ್ಮಿಕ ತತ್ವಗಳಿಗಲ್ಲ ಮತ್ತು ಭೌತಿಕವಾದ ಆಕಾರವನ್ನು ತಾಳುವ ವಸ್ತು ಅದೆಷ್ಟೇ ದೊಡ್ಡದಾಗಿರಲಿ, ಸರ್ವವ್ಯಾಪಕವಾಗಿರದೇ ಪರಿಚ್ಛಿನ್ನವಾಗಿರಬೇಕು. ಭಗವಂತನನ್ನು ಪರಿಚ್ಛಿನ್ನ ಎಂದು ಭಾವಿಸುವುದಾದರೆ, ಅವನನ್ನು ಸರ್ವಜ್ಞ, ಸರ್ವವ್ಯಾಪಕ, ಹಾಗೂ ಸರ್ವಶಕ್ತ ಎಂದು ಭಾವಿಸಲು ಸಾಧ್ಯವಿಲ್ಲ. ಅಂತಹ ಅಲ್ಪಜ್ಞ, ಏಕದೇಶೀಯ ಹಾಗೂ ಹಾಗೂ ಅಲ್ಪಶಕ್ತನಾದವನನ್ನು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದ ವಿಶ್ವಚೇತನ ಎಂದು ತಿಳಿಯುವುದೇ ತಪ್ಪಾದೀತು. ಎರಡನೆಯದಾಗಿ ಆಕಾರ, ರಿಕ್ತಪ್ರದೇಶದಲ್ಲಿ, ಪರಮಾಣುಗಳ ಸಂಯೋಗದಿಂದಲೇ ಸಂಭವ. ಇಂತಹ ಆಕಾರ ಸಾದಿ ಸಾಂತವಾಗಿರಬಲ್ಲುದೇ ಹೊರತು, ಅನಾದಿ ಅನಂತವಾಗಿರಲಾರದು. ಸಾಲದೆಂದು ಭಗವಂತನಿಗೆ ಆ ಆಕಾರವನ್ನು ರಚಿಸಿಕೊಟ್ಟವರಾರು ಎಂಬ ಬೃಹತ್ಪ್ರಶ್ನೆ ಬೇರೆ ತಲೆಯೆತ್ತುತ್ತದೆ. ಭಗವಂತನೇ ರಚಿಸಿಕೊಂಡನೇ ಎನ್ನುವುದಾದರೆ, ಅದನ್ನು ರಚಿಸಿಕೊಳ್ಳುವ ಮುನ್ನ ಅವನು ನಿರಾಕಾರನೇ ಆಗಿದ್ದನು, ಅದು ಕೆಟ್ಟುಹೋದ ಮೇಲೆ, ಮತ್ತೆ ನಿರಾಕಾರನೇ ಆಗುವನು ಎಂಬ ಪಕ್ಷವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ಆಗುವಿಕೆ-ಕೆಡುವಿಕೆ ಜನನ-ಮರಣಗಳನ್ನು ಸಂಕೇತಿಸುತ್ತದೆ. ಬೇರೆ ಯಾರಾದರೂ ರಚಿಸಿಕೊಟ್ಟರು ಎನ್ನುವುದಾದರೆ, ಭಗವಂತನಿಗೆ ಆಕಾರವಿತ್ತವರು, ಅವನಿಗಿಂತಲೂ ಶ್ರೇಷ್ಠರೇ ಆಗಿರಬೇಕು. ಇನ್ನು ಭಗವತ್ತತ್ವವೆಲ್ಲಿ ಉಳಿಯಿತು?

 ಈ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಇದೊಂದು ಸ್ಥೂಲವಾದ ತತ್ವ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಪಾಮರಕೋಟಿಯನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಪರಮಾಣುಗಳಲ್ಲಿ, ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಆಕಸ್ಮಿಕ ಘಟನೆಗಳಲ್ಲಿ ಜ್ಞಾನವನ್ನು ಸಾಂಕೇತಿಸುವ ನಿಯಮಗಳು ಎಂತಾದರೂ ಇದ್ದಾವು? ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯೀ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಈ ಜ್ಞಾನಮಯೀ ವಿರಾಟ್ ಶಕ್ತಿಯ ವಿಷಯದಲ್ಲಿ ವೇದ ಏನು ಹೇಳುತ್ತದೋ ನೋಡೋಣ:-

ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ|

ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ|| (ಯಜು.40.5.)

     [ತತ್ ಏಜತಿ] ಅದು ವಿಶ್ವಕ್ಕೆ ಗತಿ ನೀಡುತ್ತದೆ. [ತತ್ ನ ಏಜತಿ] ಅದು ಸ್ವತಃ ಚಲಿಸುವುದಿಲ್ಲ. [ತತ್ ದೂರೇ] ಅದು ದೂರದಲ್ಲಿದೆ.  [ತತ್ ಉ ಅಂತಿಕೇ] ಅದೇ ಹತ್ತಿರದಲ್ಲಿಯೂ ಇದೆ. [ತತ್ ಅಸ್ಮ ಸರ್ವಸ್ಯ ಅಂತಃ] ಅದು ಇದೆಲ್ಲದರ ಒಳಗೂ ಇದೆ. [ತತ್ ಉ ಅಸ್ಯ ಸರ್ವಸ್ಯ ಬಾಹ್ಯತಃ] ಅದೇ ಇದೆಲ್ಲದರ ಹೊರಗೂ ಇದೆ. 

     ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂಇತಿರುವ, ಸರ್ವತ್ರ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತಲಿದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ವಸ್ತುತಃ ಅದಿರುವುದು ಹಾಗೆಯೇ. ಅದರ ಭವ್ಯ ಸ್ವರೂಪವನ್ನು ನೋಡಿರಿ:-

ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಶತ್|

ತದ್ಧಾವತೋ ನ್ಯಾನತ್ಯೇತಿ ತಿಷ್ಠತ್ಯಸ್ಮಿನ್ನಪೋ ಮಾತರಿಶ್ವಾ ದಧಾತಿ|| (ಯಜು.40.4.)

     [ಏಕಮ್] ಆ ಜ್ಞಾನಮಯೀ ಶಕ್ತಿ ಒಂದೇ ಇದೆ. [ಅನೇಜತ್] ಅದು ಚಲಿಸುವುದಿಲ್ಲ. [ಮನಸಃ ಜವೀಯಃ] ಮನಸ್ಸಿಗಿಂತಲೂ ವೇಗಶಾಲಿಯಾಗಿದೆ. [ದೇವಾಃ] ಶರೀರಗತವಾದ ಇಂದ್ರಿಯಗಳು, ಅಥವಾ ವಿದ್ವಜ್ಜನರೂ ಕೂಡಿ [ಏನತ್ ನ ಆಪ್ನುವತ್] ಇದನ್ನು ಹಿಡಿಯಲಾರದು. [ಪೂರ್ವಂ ಅರ್ಶತ್] ಏಕೆಂದರೆ, ಅದು ಅವರ ಹಿಡಿತಕ್ಕಿಂತ ಬಹು ಮೇಲೆ ವಿರಾಜಿಸುತ್ತಿದೆ. [ತತ್] ಅದು, [ಧಾವತಃ ಅನ್ಯಾನ್] ಓಡುತ್ತಿರುವ ಇತರರನ್ನು [ಅತಿ ಏತಿ] ಮೀರಿಸುತ್ತದೆ. [ತಿಷ್ಯತ್] ತಾನು ಮಾತ್ರ ಸ್ಥಿರವಾಗಿ ನಿಂತಿದೆ. [ತಸ್ಮಿನ್] ಅದರಲ್ಲಿದ್ದುಕೊಂಡೇ [ಮಾತರಿಶ್ವಾ] ಆಗಸದಲ್ಲಿ ಅಥವಾ ಭೂಮಾತೆಯ ಗರ್ಭದಲ್ಲಿರುವ ಜೀವಾತ್ಮನು [ಆಪಹ ದಧಾತಿ] ಕರ್ಮನಿರತನಾಗಿದ್ದಾನೆ.

     ಎಲ್ಲವೂ ಅದರಲ್ಲಿದೆ, ಅದು ಎಲ್ಲದರಲ್ಲಿಯೂ ಇದೆ. ಆ ವ್ಯಾಪಕತ್ವ ಸರ್ವಥಾ ಅತೀಂದ್ರಿಯ, ವಿದ್ವಜ್ಜನರ ಬುದ್ಧಿಯ ಹಿಡಿತದಿಂದಲೂ ಮೇಲಕ್ಕಿದೆ, ದೂರಕ್ಕಿದೆ. ಅದು ತಾನು ಕೂಟಸ್ಥವಾಗಿದ್ದರೂ, ಅಚಲವಾಗಿದ್ದರೂ, ಗತಿಯುಕ್ತವಾದ ಗ್ರಹೋಪಗ್ರಹಗಳಿಗಿಂತಲೂ, ಅವುಗಳ ಹಿಡಿತಕ್ಕಿಂತಲೂ ದೂರದಲ್ಲಿದೆ! ಜೀವರಾದ ನಾವೆಲ್ಲರೂ ಅದರಲ್ಲಿದ್ದುಕೊಂಡೇ ವಿವಿಧ ಕರ್ಮಗಳಲ್ಲಿ ತೊಡಗಿದ್ದೇವೆ. ಈ ಎರಡು ಮಂತ್ರಗಳು ಆ ಚೇತನಶಕ್ತಿಯ ಅನಂತ ವ್ಯಾಪಕತ್ವವನ್ನು ಸೊಗಸಾಗಿ ಚಿತ್ರಿಸಿವೆ.

Permanent link to this article: http://www.vedasudhe.com/239/

ಸಾಧನಾ ಪಂಚಕಮ್-ಭಾಗ -3

ಸಾಧನಾ ಮೆಟ್ಟಿಲು:8+9+10
8. ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್
ಭಾವಾರ್ಥ:ಶರೀರವೆಂಬ ‘ಗೃಹ’ ದ ಸಂಕೋಲೆಯಿಂದ ಬೇಗನೆ ಬಿಡಿಸಿಕೊಂಡು ಸಾಧನೆಯ ಪಥದಲ್ಲಿ ಮುಂದೆ ಸಾಗು
9.ಸಂಗ: ಸತ್ಸು ವಿಧೀಯತಾಮ್
ಭಾವಾರ್ಥ:ಜ್ಞಾನಿಗಳ ಸಹವಾಸವನ್ನು ಮಾಡು
10.ಭಗವತೋ ಭಕ್ತಿರ್ದೃಢಾಧೀಯತಾಮ್
ಭಾವಾರ್ಥ: ಭಗವಂತನಲ್ಲಿ ದೃಢಭಕ್ತಿಯನ್ನು ನೆಲೆಗೊಳಿಸು

ಸಾಧನಾ ಪಂಚಕಂ -ಮೆಟ್ಟಲು- 11+ 12 + 13
11.ಶಾಂತ್ಯಾದಿ: ಪರಿಚೀಯತಾಮ್
ಭಾವಾರ್ಥ: ಶಮದಮಾದಿ ಸದ್ಗುಣಗಳನ್ನು ಬೆಳಸಿಕೊ
12.ದೃಢತರಂ ಕರ್ಮಾಶುಸನ್ತ್ಯಜ್ಯತಾಮ್
ನಿಶ್ಚಯಪೂರ್ವಕವಾಗಿ ಕಾಮ್ಯಕರ್ಮಗಳಲ್ಲಿ ಆಸಕ್ತಿಯನ್ನು ಆದಷ್ಟು ಬೇಗ ತೊರೆದುಬಿಡು
13.ಸದ್ವಿದ್ಯಾನುಪಸೃಪ್ಯತಾಮ್
ಭಾವಾರ್ಥ: ಸದ್ಗುರುಗಳ ಆಶ್ರಯವನ್ನು ಪಡೆ ಮತ್ತು ಅವರಿಗೆ ಸಂಪೂರ್ಣವಾಗಿ ಶರಣಾಗು

Permanent link to this article: http://www.vedasudhe.com/%e0%b2%b8%e0%b2%be%e0%b2%a7%e0%b2%a8%e0%b2%be-%e0%b2%aa%e0%b2%82%e0%b2%9a%e0%b2%95%e0%b2%ae%e0%b3%8d-%e0%b2%ad%e0%b2%be%e0%b2%97-3/

ಸಾಧನಾ ಪಂಚಕಂ ಭಾಗ-2

ಸಾಧನಾ ಪಂಚಕಂ -ಮೆಟ್ಟಲು-1 ರಿಂದ 6 ರ ವರಗೆ ಪುನಃ ಸ್ಮರಣೆ

ಸಾಧನಾ ಪಂಚಕಂ -ಮೆಟ್ಟಲು-1 ರಿಂದ 6 ವರಗೆ ಪುನಃ ಸ್ಮರಣೆ

ಸಾಧನಾ ಪಂಚಕಂ -ಮೆಟ್ಟಲು- 7

ಸಾಧನಾ ಪಂಚಕಂ -ಮೆಟ್ಟಲು- 7
ಆತ್ಮೇಚ್ಛಾ ವ್ಯವಸೀಯತಾಮ್
ಭಾವಾರ್ಥ: ಸ್ವಸ್ವರೂಪವನ್ನು ಅರಿತುಕೊಳ್ಳಲು ಪರಿಶ್ರಮ ಪಡು

Down load link:
http://www.divshare.com/download/15211930-df2
http://www.divshare.com/download/15212036-389

Permanent link to this article: http://www.vedasudhe.com/%e0%b2%b8%e0%b2%be%e0%b2%a7%e0%b2%a8%e0%b2%be-%e0%b2%aa%e0%b2%82%e0%b2%9a%e0%b2%95%e0%b2%82-%e0%b2%ad%e0%b2%be%e0%b2%97-2/

ವೇದೋಕ್ತ ಜೀವನ ಪಥ:ಜೀವನ ಬುನಾದಿ -5

  ಈ ಶ್ರದ್ಧಾ-ಮೇಧಾ ಸಮನ್ವಯ ವೇದಗಳ ವೈಶಿಷ್ಟ್ಯ. ವೇದಾನುಯಾಯಿಗಳ ಗುರುಮಂತ್ರವಾದ ಗಾಯತ್ರೀ ಜೀವನದ ಉತ್ಕರ್ಷದ ದಿಕ್ಕನ್ನು ತೋರಿಸುತ್ತದೆ.

ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ|

ಧಿಯೋ ಯೋ ನಃ ಪ್ರಚೋದಯಾತ್|| (ಯಜು.36.3)

[ಸವಿತುಃ ದೇವಸ್ಯ] ಸೃಜನ ಕರ್ತೃವೂ ಪ್ರೇರಕನೂ ಆದ, ಪ್ರಕಾಶಮಯ ಪ್ರಭುವಿನ [ತತ್ ವರೇಣ್ಯಂ ಭರ್ಗಃ] ಆ ಸ್ವೀಕರಣೀಯವಾದ, ಪಾಪಭಸ್ಮಕಾರಿಯಾದ ತೇಜಸ್ಸನ್ನು, [ಧೀಮಹಿ] ಧ್ಯಾನಿಸುತ್ತೇವೆ, ಧರಿಸುತ್ತೇವೆ. [ಯಃ] ಆ ಸ್ವಾಮಿಯು [ನಃ ಧಿಯಃ] ನಮ್ಮ ಬುದ್ಧಿಗಳನ್ನು ಹಾಗೂ ಕರ್ಮಗಳನ್ನು [ಪ್ರಚೋದಯಾತ್] ಪ್ರೇರಿಸಲಿ.

     ಪರಮ ವೈಜ್ಞಾನಿಕವಾದ ವೇದಗಳು, ಶ್ರದ್ಧೆಯನ್ನು ನಿಜವಾದ ಶ್ರದ್ಧೆಯಾಗಿ ಉಳಿಸಿಕೊಳ್ಳುವ ದಿವ್ಯಪಥವನ್ನು ತೋರಿ, ಯಾವ ಬಗೆಯ ಭೇಧ ಭಾವಗಳಿಗೂ ಎಡೆಯಿಲ್ಲದಂತೆ ಮಾಡಿ, ಪೃಥ್ವಿಯ ಸರ್ವಮಾನವರಿಗೂ ಮಾನವತ್ವದ ವಿಕಾಸ ಮಾಡಿಕೊಳ್ಳುವ ಬಗೆಯನ್ನು ಬಣ್ಣಿಸಿ ಹೇಳುತ್ತವೆ. ವೇದಗಳಲ್ಲಿ ಮತಮತಾಂತರಗಳ ಗೊಂದಲವಿಲ್ಲ, ಮಾನವ ಜಾತಿಯನ್ನು ಹರಿದು ಹಂಚಿಹಾಕುವ ಹೊಂಚಿಲ್ಲ. ವೇದಗಳನ್ನು ಹಿಂದೂಗಳ ಶಾಸ್ತ್ರವೆಂದು ಕರೆಯುವುದು ವೇದಗಳ ಔನ್ನತ್ಯಕ್ಕೆ ಅಪಮಾನ ಮಾಡಿದಂತೆಯೇ ಸರಿ. ಈಶ್ವರೀಯ ವೇದಗಳು ಸರ್ವಮಾನವರ ಸಂಪತ್ತು. ವೇದಗಳು ಜೀವಮಾತ್ರರನ್ನು -ಇನ್ನು ಮಾನವಮಾತ್ರರೆಂದು ಬೇರೆ ಹೇಳಬೇಕೇನು?- ಅಮರನಾದ ಪ್ರಭುವಿನ ಮಕ್ಕಳೆಂದು ಕರೆಯುತ್ತವೆ:-

ಯುಜೇ ವಾಂ ಬ್ರಹ್ಮ ಪೂರ್ವ್ಯಂ ನಮೋಭಿರ್ವಿ ಶ್ಲೋಕ ಏತು ಪಥ್ಯೇವ ಸೂರೇಃ|

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾ ಆ ಯೇ ಧಾಮಾನಿ ದಿವ್ಯಾನಿ ತಸ್ಥುಃ|| (ಯಜು.11.5)

     ನರನಾರಿಯರೇ! [ವಾಮ್] ನಿಮ್ಮಿಬ್ಬರನ್ನೂ [ಪೂರ್ವ್ಯಂ ಬ್ರಹ್ಮಯುಜೇ] ಅನಾದಿ ಭಗವದ್ವಾಣಿಯೊಂದಿಗೆ ನಿಯೋಜಿಸುತ್ತೇನೆ. [ಸೂರೇ ಪಥ್ಯಾ ಇವಾ] ಜ್ಞಾನಿಯ ಮಾರ್ಗದಲ್ಲಿ ನಡೆದಂತೆ [ನಮೋಭಿಃ] ವಿನಯದಿಂದ [ಶ್ಲೋಕಃ ವಿ ಏತು] ನಿಮ್ಮ ಕೀರ್ತಿ ಹರಡಲಿ. [ಯೇ] ಯಾರು [ದಿವ್ಯಾನಿ ಧಾಮಾನಿ ಆತಸ್ಥುತುಃ] ದೇವನಿರ್ಮಿತ ನೆಲೆಗಳಲ್ಲಿ ನೆಲೆಸಿರುವರೋ [ಅಮೃತಸ್ಯ ವಿಶ್ವೇ ಪುತ್ರಾಃ] ಆ ಅಮರ ಪ್ರಭುವಿನ ಮಕ್ಕಳೆಲ್ಲರೂ [ಶೃಣ್ವಂತು] ಆಲಿಸಲಿ. ವೇದಗಳ ದೃಷ್ಟಿಯಲ್ಲಿ ಮಾನವರೆಲ್ಲಾ ಭಗವದ್ಪುತ್ರರೇ. ಅಷ್ಟೇ ಅಲ್ಲ ಮಾನವ ಗೌರವವನ್ನು ವೇದಗಳು ಸಾರುತ್ತಿರುವ ರೀತಿಯೂ ಅದ್ಭುತವೇ.

ಅಯಂ ನಾಭಾ ವದತಿ ವಲ್ಗು ವೋ ಗೃಹೇ ದೇವಪುತ್ರಾ ಋಷಯಸ್ತಚ್ಛೃಣೋತನ|

 

ಸುಬ್ರಹ್ಮಣ್ಯಮಂಗಿರಸೋ ವೋ ಅಸ್ತು ಪ್ರತಿ ಗೃಭ್ಣೀತ ಮಾನವಂ ಸುಮೇಧಸಃ|| (ಋಕ್.10.62.4)

 

     [ದೇವಪುತ್ರಾ] ಭಗವಂತನ ಮಕ್ಕಳೇ! [ಋಷಯಃ] ತತ್ವದರ್ಶಿಗಳೇ! [ಆಂಗೀರಸಃ] ದೇಹಧಾರಿಗಳಿಗೆ ದಾನ ನೀಡುವ ಉದಾರಾತ್ಮರೇ! [ಸುಮೇಧಸಃ] ಉತ್ತಮ ಬುದ್ಧಿಶಾಲಿಗಳೇ! [ಅಯಂ ನಾಭಾ] ಈ ವಿಶ್ವಕೇಂದ್ರನಾದ ಭಗವಂತನು [ವೋ ಗೃಹೇ] ನಿಮ್ಮ ಮನೆಯಲ್ಲಿ [ವಲ್ಗು ವದತಿ] ಸುಂದರವಾಗಿ ಮಾತನಾಡುತ್ತಾನೆ. [ತತ್ ಶೃಣೋತನ] ಅದನ್ನಾಲಿಸಿರಿ. [ವಃ ಸುಬ್ರಹ್ಮಣ್ಯಂ ಸು ಅಸ್ತು] ನಿಮ್ಮ ವೇದಜ್ಞಾನ ಒಳಿತನ್ನುಂಟುಮಾಡಲಿ. [ಮಾನವಂ ಪ್ರತಿಗೃಭ್ಣೀತ] ಮಾನವನನ್ನು ನಿಮ್ಮವನನ್ನಾಗಿ ಮಾಡಿಕೊಳ್ಳಿರಿ.

 

     ಹಿಂದೂಗಳೋ, ಕ್ರೈಸ್ತರೋ, ಮುಸಲ್ಮಾನರೋ, ಜೈನರೋ, ಬೌದ್ಧರೋ ಯಾರಾದರೂ ಆಗಿರಲೊಲ್ಲರೇಕೆ? ಮನೆ ಮನೆಯಲ್ಲಿಯೂ ವೇದಪ್ರವಚನ- ವೇಧಶ್ರವಣಗಳು ನಡೆದಲ್ಲಿ, ಮನಮನೆಯಲ್ಲಿಯೂ ಮಹಾಮಹಿಮನಾದ ಭಗವಂತನು ಮಾತನಾಡುತ್ತಾನೆ. ಅವನಿಗೆ ಅವನ ಮಕ್ಕಳಾದ ಮಾನವರೆಲ್ಲರ ಮೇಲೂ ಸಮನಾದ ಅಕ್ಕರೆಯೇ! ಇಂತಹ ಪವಿತ್ರ ವೇದಗಳು, ಸರ್ವಮಾನವರ ಸಂಪತ್ತಾದ ವೇದಗಳು ತೋರಿಸುವ ಜೀವನಮಾರ್ಗ ಹೇಗಿದೆ ಎಂದು ಮುಂದೆ ನೋಡೋಣ. ಎಲ್ಲ ಮತೀಯ ಪಕ್ಷಪಾತ, ದುರಾಗ್ರಹಗಳಿಗೂ ತಿಲಾಂಜಲಿಯಿತ್ತು ವೇದೋಕ್ತವಾದ ದಿವ್ಯ ಜೀವನಮಾರ್ಗವನ್ನು ಕಂಡುಕೊಳ್ಳೋಣ.

ವೇದಗಳ ಈ ಪ್ರೋತ್ಸಾಹಪ್ರದವಾದ ಕರೆಗೆ ಕಿವಿಗೊಡೋಣ:

ಸರ್ವೋ ವೈ ತತ್ರ ಜೀವತಿ ಗೌರಶ್ವಃ ಪುರುಷಃ ಪಶುಃ
ಯತ್ರೇದಂ ಬ್ರಹ್ಮ ಕ್ರಿಯತೇ ಪರಿಧಿರ್ಜೀವನಾಯ ಕಮ್ (ಅಥರ್ವ. 8.2.25)

[ಯತ್ರ] ಎಲ್ಲಿ [ಇದಂ ಬ್ರಹ್ಮ] ಈ ವೇದಜ್ಞಾನವು [ಕಮ್] ಅನುಕೂಲವಾದ ರೀತಿಯಲ್ಲಿ [ಜೀವನಾಯ ಪರಿಧಿಃ ಕ್ರಿಯತೇ] ಜೀವನದ ಸುತ್ತುಗಟ್ಟಾಗಿ ಮಾಡಲ್ಪಡುತ್ತದೋ [ತತ್ರ] ಅಲ್ಲಿ [ಗೌಃ] ಗೋವು [ಅಶ್ವಃ] ಕುದುರೆ [ಪುರುಷಃ] ಮಾನವ [ಪಶುಃ] ಇತರ ಜೀವರಾಶಿ [ಸರ್ವ] ಎಲ್ಲರೂ [ವೈ] ನಿಜವಾಗಿ [ಜೀವತಿ] ಜೀವಿಸುತ್ತವೆ. ಬೇರೆ ಸಂಪ್ರದಾಯಗಳೊಂದಿಗೆ ವೇದೋಪದೇಶವನ್ನು ಹೋಲಿಸಲು ಸಾಧ್ಯವಿಲ್ಲ. ವೇದಗಳ ವೈಭವವೇ ಬೇರೆ, ಅವುಗಳ ಸ್ತರವೇ ಬೇರೆ. ಎಲ್ಲಾ ಜಾತಿಗಳವರೂ, ಎಲ್ಲಾ ಮತಗಳವರೂ ವೇದಗಳು ತಮ್ಮವೆಂದು ಹೇಳಿಕೊಳ್ಳಬಹುದು. ಏಕೆಂದರೆ ವೇದೋಪದೇಶ ಮಾನವ ಮಾತ್ರರ ಸರ್ವವಿಧೋತ್ಕರ್ಷಕ್ಕೆ ಎಂದಿಗೂ ನಿರರ್ಥಕವಾಗದ ದಿವ್ಯಸಾಧನ.

ಮಾನವಜೀವನ ಸಾರ್ಥಕವಾಗಬೇಕಾದರೆ ತನ್ನತನವನ್ನು ಪೂರ್ಣವಾಗಿ ಲಯವಾಗಿಸಬೇಕು. ತಾನು ಸಮಾಜಜೀವಿ, ಓರ್ವನೇ ಜೀವಿಸಲಾರೆ ಎಂಬ ಸತ್ಯವನ್ನು ತಿಳಿದು ಅದಕ್ಕೆ ಬೇಕಾದ ಸಮಸ್ತವನ್ನೂ ಅರಿಯದೆ ಮುಂದುವರೆಯಲು ಸಾಧ್ಯವಾಗದು. ಸಮಾಜದಿಂದ ಮುಂದೆ ಹೋಗುವಾಗ ರಾಷ್ಟ್ರದ ವಿಚಾರ ಬರುತ್ತದೆ. ಆದ್ದರಿಂದ ಸಮಾಜಪ್ರಜ್ಞೆ, ರಾಷ್ಟ್ರಪ್ರಜ್ಞೆ ಅಗತ್ಯವಾಗಿವೆ. ಇದನ್ನು ಅರಿಯಲು ತಾನು ಹೋಗಬೇಕಾದುದು ಎಲ್ಲಿಗೆ ಎಂಬುದರ ಸ್ಪಷ್ಟ ಅರಿವು ಆದಾಗ ಈ ಆದರ್ಶ ಸೂತ್ರಗಳಿಂದ ಸದಾ ಕರ್ತವ್ಯೋನ್ಮುಖರಾಗಬೇಕಾದುದು ಅನಿವಾರ್ಯವಾಗುತ್ತದೆ. ಆದ ಕಾರಣ ಜೀವನಾದರ್ಶನದ ವಿಚಾರಗಳನ್ನು ನಾವು ತಿಳಿದುಕೊಂಡು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡಲು ಅನುಕೂಲವಾಗುವುದು.

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5%e0%b2%9c%e0%b3%80%e0%b2%b5%e0%b2%a8-%e0%b2%ac%e0%b3%81%e0%b2%a8%e0%b2%be/

Older posts «