ವೇದೋಕ್ತ ಜೀವನ ಪಥ: ವೇದೋಕ್ತ ರಾಜನೀತಿ – ೨

ಆ ಸಂಸತ್ತಿಗೆ ಆರಿಸಿ ಬರುವ ಸದಸ್ಯರು ಹೇಗಿರಬೇಕು? ಯಜುರ್ವೇದ ಹೇಳುತ್ತಲಿದೆ:-
ಯೇ ದೇವಾ ಅಗ್ನಿನೇತ್ರಾಃ ಪುರಃ ಸದಸ್ತೇಭ್ಯಃ ಸ್ವಾಹಾ|
ಯೇ ದೇವಾ ಯಮನೇತ್ರಾಃ ದಕ್ಷಿಣಾ ಸದಸ್ತೇಭ್ಯಃ ಸ್ವಾಹಾ|
ಯೇ ದೇವಾ ವಿಶ್ವದೇವನೇತ್ರಾಃ ಪಶ್ಚಾತ್ಸದಸ್ತೇಭ್ಯಃ ಸ್ವಾಹಾ|
ಯೇ ದೇವಾ ಮಿತ್ರಾವರುಣನೇತ್ರಾ ವಾ ಮರುನ್ನೇತ್ರಾ ವೋತ್ತರಾಸದಸ್ತೇಭ್ಯಃ ಸ್ವಾಹಾ|
ಯೇ ದೇವಾಃ ಸೋಮನೇತ್ರಾ ಉಪರಿಸದೋ ದುವಸ್ವಂತಸ್ತೇಭ್ಯಃ ಸ್ವಾಹಾ||
(ಯಜು.೯.೩೬.)
[ಯೇ ದೇವಾಃ] ಯಾವ ಉನ್ನತ ಗುಣವಂತರಾದ ವಿದ್ವಾಂಸರು, [ಅಗ್ನಿನೇತ್ರಾಃ] ರಾಷ್ಟ್ರೋತ್ಥಾನಕವಾದ ರಾಜನೀತಿ ನಿಪುಣರೋ, ಮತ್ತು [ಪುರಃ ಸದಃ] ಶಾಸಕನ ಮುಂದೆ ಕುಳಿತುಕೊಳ್ಳುವವರಾಗಿರುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ಉದಾರಾತ್ಮರಾದ ವಿದ್ವಾಂಸರು, [ಯಮನೇತ್ರಾಃ] ನ್ಯಾಯಶಾಸ್ತ್ರನಿಪುಣರೋ, ಮತ್ತು [ದಕ್ಷಿಣಾಸದಃ] ಸರ್ವೋಚ್ಚ ಶಾಸಕನ ಬಲಗಡೆ ಕುಳಿತುಕೊಳ್ಳುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ಶ್ರೇಷ್ಠ ಗುಣಿಗಳಾದ ವಿದ್ವಾಂಸರು, [ವಿಶ್ವದೇವನೇತ್ರಾಃ] ಸಮಸ್ತ ಭೌತಿಕ ವಿಜ್ಞಾನದಲ್ಲಿ ನಿಪುಣರೋ, ಮತ್ತು, [ಪಶ್ಚಾತ್ಸದಃ] ಸರ್ವೋಚ್ಚ ಶಾಸಕನ ಹಿಂದೆ ಕುಳಿತುಕೊಳ್ಳುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ಉದಾರ ಚರಿತರಾದ ವಿದ್ವಾಂಸರು, [ಮಿತ್ರಾವರುಣನೇತ್ರಾಃ] ಮಿತ್ರರನ್ನೂ ಮತ್ತು ನಿವಾರಿಸಲರ್ಹರಾದ ಶತ್ರುಗಳನ್ನು ಗುರುತಿಸುವುದರಲ್ಲಿ ನಿಪುಣರೋ, [ವಾ ವಾ] ಅಥವಾ [ಮರುನ್ನೇತ್ರಾಃ] ಆತ್ಮ ಬಲಿದಾನಕ್ಕೂ ಸಿದ್ಧರಾಗುವ ಯುದ್ಧಕಲಾನಿಪುಣರೋ, ಮತ್ತು, [ಉತ್ತರಾಸದಃ] ರಾಷ್ಟ್ರಪತಿಯ ಎಡಗಡೆಗೆ ಕುಳಿತುಕೊಳ್ಳುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ. [ಯೇ ದೇವಾಃ] ಯಾವ ದಿವ್ಯಗುಣಸಂಪನ್ನರಾದ ವಿದ್ವಾಂಸರು, [ಸೋಮನೇತ್ರಾಃ] ಆಧ್ಯಾತ್ಮವಿದ್ಯಾನಿಪುಣರೋ, [ಉಪರಿಸದಃ] ಉಚ್ಚಾಸನಗಳಲ್ಲಿ ಕುಳಿತುಕೊಳ್ಳುತ್ತಾರೋ, ಮತ್ತು, [ದುವಸ್ವಂತಃ] ಪ್ರಭೂಪಸನಾನಿರತರಾಗಿರುತ್ತಾರೋ, [ತೇಭ್ಯಃ ಸ್ವಾಹಾ] ಅವರಿಗೆ ಗೌರವ ಸಲ್ಲಲಿ.
ಈ ಉದ್ಧರಣದಲ್ಲಿ ಮೊದಲು ಗಮನಿಸಬೇಕಾದ ಅಂಶವೇನೆಂದರೆ ಸಂಸತ್ತಿನ ಎಲ್ಲಾ ಸದಸ್ಯರೂ ಪ್ರಥಮತಃ ‘ದೇವಜನರು’ ಎಂದರೆ, ಶ್ರೇಷ್ಠತರದ ಜೀವನ ನಡೆಸುವ ಸತ್ಯಸಂಧರಾದ, ಉದಾರಾತ್ಮರಾದ ಪುರುಷರಾಗಿರಬೇಕು. ಅಂತಹ ಐದು ಬಗೆಯ ದೇವಜನರು, ಅಂದರೆ, ರಾಜನೀತಿ ನಿಪುಣರು, ನ್ಯಾಯಶಾಸ್ತ್ರ ನಿಪುಣರು, ಭೌತಿಕ ವಿಜ್ಞಾನ ನಿಪುಣರು, ಮಿತ್ರ-ಶತ್ರುಗಳನ್ನು ಗುರುತಿಸಬಲ್ಲ, ಆತ್ಮತ್ಯಾಗಕ್ಕೂ ಸಿದ್ಧರಾದ ಯುದ್ಧಕಲಾನಿಪುಣರು ಮತ್ತು ಭಗವದುಪಾಸಕರಾದ ಆಧ್ಯಾತ್ಮ ವಿದ್ಯಾ ನಿಪುಣರೂ ಸಂಸತ್ತಿನ ಸದಸ್ಯರಾಗಬೇಕು. ಈ ಸಂಸತ್ತಿನ ಸದಸ್ಯರೇ ತಮ್ಮಲ್ಲಿ ಒಬ್ಬನನ್ನು ರಾಷ್ಟ್ರದ ಉಚ್ಚತಮ ಶಾಸಕನನ್ನಾಗಿ ಆರಿಸಬೇಕು. ರಾಜನೀತಿ ನಿಪುಣರು ರಾಷ್ಟ್ರಪತಿಯ ಮುಂದೆ, ನ್ಯಾಯಶಾಸ್ತ್ರ ನಿಪುಣರು ಬಲಕ್ಕೆ, ಭೌತಿಕ ವಿಜ್ಞಾನ ನಿಪುಣರು ಹಿಂದೆ, ಯುದ್ಧಕಲಾ ನಿಪುಣರು ಎಡಕ್ಕೆ ಮತ್ತು ಆಧ್ಯಾತ್ಮವಿದ್ಯಾ ನಿಪುಣರು ಇವರೆಲ್ಲರಿಗಿಂತ ಉನ್ನತಾಸನದಲ್ಲಿ ಕುಳಿತುಕೊಳ್ಳಬೇಕು. ಇಂತಹ ವಿಶೇಷಜ್ಞರಾದ ವಿದ್ವಾಂಸರನ್ನು ಬಿಟ್ಟು, ನಿರಕ್ಷರಕುಕ್ಷಿಗಳೂ, ಸ್ವಾರ್ಥಪರರೂ ಆದವರನ್ನು ಸಂಸತ್ತಿಗೆ ಆರಿಸುವಂತಿಲ್ಲ.
ಈ ಸಂಸತ್ಸದಸ್ಯರನ್ನು ಆರಿಸುವವರಾರು? ವೇದಗಳು ನಿರ್ವಾಚಕರಿಗೂ ಸಹ ಕೆಲವು ಯೋಗ್ಯತೆಗಳನ್ನು ವಿಧಿಸುತ್ತವೆ. ಇಲ್ಲಿ ಕೇಳಿರಿ:-
ಅರ್ಥೇತಃ ಓಜಸ್ವತೀಃ ಆಪಃ ಪರಿವಾಹಿಣೀಃ ಸ್ಥ ರಾಷ್ಟ್ರದಾ ರಾಷ್ಟ್ರಂ ಮೇ ದತ್ತ ||
(ಯಜು.೧೦.೩.)
[ಅರ್ಥೇತಃ] ಸಂಪತ್ತನ್ನು ಸಂಪಾದಿಸುವವರು, [ಓಜಸ್ವತೀಃ] ಓಜಸ್ಸಿನಿಂದ ಪ್ರಕಾಶಿಸುವವರಾಗಿದ್ದೀರಿ. [ಆಪಃ ಪರಿವಾಹಿಣೀಃ] ಇತರರನ್ನೂ ಮುಂದಕ್ಕೆ ತರುವ ಆಪ್ತರಾಗಿದ್ದೀರಿ. [ರಾಷ್ಟ್ರದಾಃ] ನೀವೆಲ್ಲರೂ ರಾಷ್ಟ್ರವನ್ನು, ಶಾಸನಾಧಿಕಾರವನ್ನು ಕೊಡುವವರಾಗಿದ್ದೀರಿ. [ರಾಷ್ಟ್ರಂ ಮೇ ದತ್ತಾ] ಶಾಸನಾಧಿಕಾರವನ್ನು ಕೊಡಿರಿ.
ಇವು ಸಂಸತ್ತಿನ ಸದಸ್ಯತ್ವಕ್ಕೆ ಅಭ್ಯರ್ಥಿಯಾಗಿ ನಿಂತವನು ಜನಸಾಮಾನ್ಯರಿಗೆ ಹೇಳುವ ಮಾತುಗಳು. ಒಂದಿಲ್ಲೊಂದು ವೈಶಿಷ್ಟ್ಯ ಪಡೆದಿರುವವರೇ ಮತದಾನ ಮಾಡಲು ಅರ್ಹರು. ಅಂತಹ ಪ್ರಜೆಗಳನ್ನು ‘ರಾಷ್ಟ್ರದಾಃ’ ಎಂದು ಕರೆದಿರುವುದು ಗಮನಾರ್ಹವಾದ ವಿಷಯ. ವಸ್ತುತಃ ಪ್ರಜೆಗಳೇ ಶಾಸನಾದಿಕಾರವನ್ನು ಕೊಡುವವರು. ಇಂತಹವರು ಚುನಾಯಿಸಿದ ಪ್ರತಿನಿಧಿಗಳಿಂದ ಕೂಡಿದ ಸಂಸತ್ತನ್ನು ವೇದಗಳು ‘ಸಭೆ’ ಎಂದು ಕರೆಯುತ್ತವೆ. ಈ ಸಭೆ ಪ್ರಧಾನಶಾಸಕನನ್ನು ಹಿಂದೆ ಹೇಳಿದಂತೆ ಆರಿಸುತ್ತದೆ. ಆ ಪ್ರಧಾನ ಶಾಸಕನು, ಸಭೆಯ ಸದಸ್ಯರಿಂದಲೇ ಆವಶ್ಯಕವಾದ ಸಂಖ್ಯೆಯಲ್ಲಿ ಜನರನ್ನು ಆರಿಸಿಕೊಂಡು, ಶಾಸನಕಾರ್ಯ ನಿರ್ವಹಿಸಲು ‘ಮಂತ್ರಿಮಂಡಲ’ವನ್ನು ರಚಿಸಿಕೊಳ್ಳುತ್ತಾನೆ. ಈ ಮಂತ್ರಿಮಂಡಲ, ವೇದಗಳ ಭಾಷೆಯಲ್ಲಿ ‘ಸಮಿತಿ’ ಎನಿಸಿಕೊಳ್ಳುತ್ತದೆ.
-ಪಂ. ಸುಧಾಕರ ಚತುರ್ವೇದಿ.

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%b0-2/

ವೇದೋಕ್ತ ಜೀವನ ಪಥ: ವೇದೋಕ್ತ ರಾಜನೀತಿ – ೧

ಚತುರ್ವೇದಗಳ ಪರಿಪೂರ್ಣ ಜ್ಞಾನವಿಲ್ಲದ ವಿದ್ವಾಂಸರು – ಪ್ರಾಚೀನ ಕಾಲದ ಆರ್ಯರಿಗೆ ರಾಷ್ಟ್ರದ ಕಲ್ಪನೆಯಿರಲಿಲ್ಲ – ಎಂದು ಮುಂತಾಗಿ ಹೇಳುವುದುಂಟು. ಆದರೆ, ಸಂಪೂರ್ಣ ವೇದಗಳನ್ನು ಬಲ್ಲವರಿಗೆ ವೇದಗಳಲ್ಲಿ ಸಮಸ್ತ ವಿದ್ಯೆಗಳೂ ಇವೆ, ಮಾನವನ ಸಾಮೂಹಿಕ ಜೀವನಕ್ಕೆ ಪ್ರಬಲ ಆಧಾರವಾದ ರಾಜನೀತಿಯೂ ತುಂಬಿದೆ – ಎಂಬ ತಥ್ಯ ಚೆನ್ನಾಗಿ ಗೊತ್ತು. ಇಂದಿನ ಕಲ್ಪನೆಯ ಸಾಮ್ರಾಜ್ಯವಾದ, ಬಂಡವಾಳಶಾಹಿವಾದ, ಸಾಮ್ಯವಾದ, ಸಮಾಜವಾದ, ಅಧಿನಾಯಕವಾದ ಮೊದಲಾದ ಆಧುನಿಕ ವಾದಗಳನ್ನು ವೇದಗಳಲ್ಲಿ ಹುಡುಕುವುದು ತಪ್ಪಾದೀತು. ಆಧುನಿಕ ವಾದಗಳಲ್ಲಿ ಯಾವುದಾದರೂ, ವೈದಿಕ ರಾಜನೀತಿಗೆ ಹತ್ತಿರವಿದ್ದಲ್ಲಿ ಅದು ಪ್ರಜಾತಂತ್ರವೇ ಎಂದು ನಿಸ್ಸಂದೇಹವಾಗಿ ಹೇಳಬಹುದು. ಅಥರ್ವವೇದದ ಈ ಮಂತ್ರವನ್ನು ಓದಿರಿ:-
ತ್ವಾಂ ವಿಶೋ ವೃಣತಾಂ ರಾಜ್ಯಾಯ ತ್ವಾಮಿಮಾಃ ಪ್ರದಿಶಃ ಪಂಚ ದೇವೀಃ |
ವರ್ಷನ್ರಾಷ್ಟ್ರಸ್ಯ ಕಕುದಿ ಶ್ರಯಸ್ಯ ತತೋ ನ ಉಗ್ರೋ ವಿ ಭಜಾ ವಸೂನಿ ||
(ಅಥರ್ವ.೩.೪.೨.)
[ವರ್ಷನ್] ಓ ಸರ್ವಸುಖದಾಯಕನಾದ ಶಾಸಕನೇ! [ವಿಶಃ] ಪ್ರಜೆಗಳು, [ರಾಜ್ಯಾಯ] ರಾಜಕಾರ್ಯಕ್ಕಾಗಿ, [ತ್ವಾ ವೃಣತಾಮ್] ನಿನ್ನನ್ನು ಆರಿಸಲಿ. [ಇಮಾಃ ಪಂಚದೇವೀಃ ಪ್ರದಿಶಃ] ಈ ಸಂಸತ್ತಿನ ಐದು ದಿಕ್ಕಿನಲ್ಲಿಯೂ ಮಂಡಿಸಿರುವ, ಜ್ಞಾನತೇಜಸ್ಸಿನಿಂದ ಬೆಳಗುವ ಸದಸ್ಯರು, [ತ್ವಾ] ನಿನ್ನನ್ನು ಆರಿಸಲಿ. [ರಾಷ್ಟ್ರಸ್ಯ ಕಕುದಿ] ರಾಷ್ಟ್ರದ ಉನ್ನತಸ್ಥಾನದಲ್ಲಿ, [ಶ್ರಯಸ್ವ] ವಿರಾಜಿಸು. [ತತಃ] ಅಧಿಕಾರ ಗ್ರಹಣಾನಂತರ, [ಉಗ್ರಃ] ಶಕ್ತಿಸಂಪನ್ನನಾಗಿ, [ನಃ] ಪ್ರಜೆಗಳಾದ ನಮಗೆ, [ವಸೂನಿ ವಿ ಭಜ] ಐಶ್ವರ್ಯವನ್ನು, ಆಜೀವಿಕಾ ಸಾಧನಗಳನ್ನು ಹಂಚಿಕೊಡು.
ಈ ಮಂತ್ರದಲ್ಲಿ ಬಂದಿರುವ ‘ವೃಣತಾಮ್’ ಎಂಬ, ಆರಿಸಲಿ ಎಂಬರ್ಥದ ಶಬ್ದವನ್ನು ಪಾಠಕರು ಗ್ರಹಿಸಬೇಕು. ರಾಷ್ಟ್ರದ ಸರ್ವೋಚ್ಚ ಸ್ಥಾನದಲ್ಲಿ ಕುಳಿತುಕೊಳ್ಳುವ ಶಾಸಕನನ್ನು ಪ್ರಜೆಗಳೇ ಆರಿಸಬೇಕು. ಇದರ ಹಿಂದಿನ ಮಂತ್ರದಲ್ಲೂ, ಸರ್ವಸ್ತ್ವಾ ರಾಜನ್ ಪ್ರದಿಶೋ ಹ್ವಯಂತು ||
(ಅಥರ್ವ.೩.೪.೧.) – ಓ ಪ್ರಕಾಶಮಯ ಶಾಸಕ! ನಿನ್ನನ್ನು ಐದು ದಿಕ್ಕುಗಳಲ್ಲಿನ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯಭಾಗದ ಜನರೂ ಅಧಿಕಾರಕ್ಕಾಗಿ ಕರೆಯಲಿ – ಎಂಬ ಆದೇಶವನ್ನೇ ಕಾಣುತ್ತೇವೆ. ಯಜುರ್ವೇದದಲ್ಲಿಯೂ ಪ್ರಜಾತಂತ್ರದ ಸ್ಪಷ್ಟ ಉಲ್ಲೇಖ ಕಂಡುಬರುತ್ತದೆ. ನೋಡಿರಿ:-
ಇಮಂ ದೇವಾ ಅಸಪತ್ನಂ ಸುವಧ್ವಂ ಮಹತೇ ಕ್ಷತಾಯ ಮಹತೇ ಜಾನರಾಜ್ಯಾಯೇಂದ್ರಸ್ಯೇಂದ್ರಿಯಾಯ| ಇಮಮಮುಷ್ಯ ಪುತ್ರಮಮುಷ್ಯೈ ಪುತ್ರಮಸ್ಯೈ ವಿಶ ಏಷ ವೋsರಾಜಾ ಸೋಮೋಸ್ಮಾಕಂ ಬ್ರಾಹ್ಮಣಾನಾಂ ರಾಜಾ || (ಯಜು.೯.೪೦.)
[ದೇವಾಃ] ನಿತ್ಯ ಜಾಗರೂಕರಾದ, ಸತ್ಯಾಚಾರ-ವಿಚಾರವಂತರಾದ, ಉದಾರಾತ್ಮರಾದ ವಿದ್ವಾಂಸರೇ! [ಅಸಪತ್ನಂ ಇಮಮ್] ಶತ್ರುರಹಿತನಾದ ಇವನನ್ನು, [ಅಮುಷ್ಯಪುತ್ರಮ್] ಇಂತಹವನ ಮಗನಾದ, [ಅಮುಷ್ಯೈ ಪುತ್ರಮ್] ಇಂತಹವಳ ಮಗನಾದ, [ಇಮಮ್] ಇವನನ್ನು [ಅಸ್ಮೇ ವಿಶೇ] ಈ ಪ್ರಜಾವೃಂದಕ್ಕಾಗಿ, [ಮಹತಾ ಕ್ಷತ್ರಾಯ] ಮಹಚ್ಛಕ್ತಿಗಾಗಿ, [ಮಹತೇ ಜಾನಜ್ಯೈಷ್ಠಾಯ] ಮಹಾನ್ ಔನ್ನತ್ಯಕ್ಕಾಗಿ, [ಮಹತೇ ಜಾನರಾಜ್ಯಾಯ] ಮಹಾನ್ ಜನತಂತ್ರಕ್ಕಾಗಿ, [ಇಂದ್ರಸ್ಯ ಇಂದ್ರಿಯಾಯ] ಪರಮೈಶ್ವರ್ಯವಾನ್ ಪ್ರಭುವಿನ ಆನಂದದ ಪ್ರಾಪ್ತಿಗಾಗಿ, [ಸುವದ್ವಮ್] ಅಭಿಕ್ತನನ್ನಾಗಿ ಮಾಡಿರಿ. [ಏಷಃ ಸೋಮಃ] ಈ ಪ್ರಜಾವತ್ಸಲನಾದ, ಪ್ರಶಾಂತ ಪುರುಷನು, [ವಃ ರಾಜಾ] ನಿಮ್ಮ ರಾಜನು. [ಅಸ್ಮಾಕಂ ಬ್ರಾಹ್ಮಣಾನಾಂ ರಾಜಾ] ಬ್ರಹ್ಮಜ್ಞರಾದ ನಮ್ಮ ರಾಜನು.
ಮಂತ್ರವನ್ನು ಗಮನವಿಟ್ಟು ಓದಿದರೆ, ಆಚಾರ್ಯ ಪುರುಷರು, ಪ್ರಜೆಗಳಿಂದ ಸಂಸತ್ತಿಗಾಗಿ ಆರಿಸಲ್ಪಟ್ಟ ವಿದ್ವಾಂಸರನ್ನು ಸಂಬೋಧಿಸಿ, ಸರ್ವೋಚ್ಚ ಶಾಸಕನನ್ನು ಆರಿಸಿ, ಅವನಿಗೆ ಅಭಿಷೇಕ ಮಾಡಬೇಕೆಂದು ಆದೇಶ ನೀಡುತ್ತಿರುವುದು ಗೊತ್ತಾಗುತ್ತದೆ. ಆ ಸರ್ವೋಚ್ಚ ಶಾಸಕನು ಶತ್ರುರಹಿತನಾಗಿರಬೇಕು. ಬೃಹತ್ತಾದ ಕ್ಷಾತ್ರ ಶಕ್ತಿಯನ್ನೂ, ಮಹಾನ್ ಜ್ಯೇಷ್ಠತ್ವವನ್ನೂ, ಪ್ರಜಾಸತ್ತೆಯನ್ನೂ, ಕೊನೆಗೆ ಜನಮನದ ಮನದಲ್ಲಿಯೂ ಮಿತ್ರಭಾವನೆಗಳನ್ನೂ ಜಾಗರಿಸಿ, ಅವರಿಗೆ ಭಗವದಾನಂದವನ್ನೂ ಒದಗಿಸಲು ಸಮರ್ಥನಾಗಿರಬೇಕು. ಅವನು ‘ಸೋಮ’ ಎಂದರೆ, ಜನರೆಲ್ಲರ ಸಾರರೂಪನಾಗಿರಬೇಕು. ಇಂತಹ ಸರ್ವೋನ್ನತ ಶಾಸಕನನ್ನು ಆರಿಸುವವರು, ಪ್ರಜೆಗಳಿಂದ ಆರಿಸಲ್ಪಟ್ಟ ಸಂಸತ್ತಿನ ಸದಸ್ಯರು.
-ಪಂ. ಸುಧಾಕರ ಚತುರ್ವೇದಿ.

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%b0/

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು – ೪

ಹದಿನಾಲ್ಕನೆಯ ಸಂಸ್ಕಾರ ವಾನಪ್ರಸ್ಥ. ಚತುರಾಶ್ರಮಗಳ ಅಧ್ಯಾಯದಲ್ಲಿ ಹೇಳಿರುವಂತೆ ೨೫ ವರ್ಷಗಳ ಗೃಹಸ್ಥಜೀವನದ ನಂತರ, ಪುರುಷನು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸುವಾಗ ಮಾಡುವ ಸಂಸ್ಕಾರವಿದು. ಬೃಹತ್ ಹವನವನ್ನು ಮಾಡಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿ, ಹಿರಿಯರ ಆಶೀರ್ವಾದ ಪಡೆದು, ಪತ್ನಿಯೊಂದಿಗೆ ಅಥವಾ ಒಬ್ಬನೇ ತನ್ನ ನೂತನ ಸ್ಥಾನಕ್ಕೆ ತೆರಳುತ್ತಾನೆ.
ಹದಿನೈದನೆಯ ಸಂಸ್ಕಾರ ಸಂನ್ಯಾಸ. ವಾನಪ್ರಸ್ಥವನ್ನು ಮುಗಿಸಿ ಸಂನ್ಯಾಸವನ್ನು ತೆಗೆದುಕೊಳ್ಳುವಾಗ ಮಾಡುವ ಸಂಸ್ಕಾರವಿದು. ಬೇರೊಬ್ಬ ವಿದ್ವಾನ್ ಸಂನ್ಯಾಸಿಯು ವಾನಪ್ರಸ್ಥಿಗೆ ಸಂನ್ಯಾಸದೀಕ್ಷೆ ಕೊಡುತ್ತಾನೆ. ‘ನಾನು ಮಕ್ಕಳ ಮೇಲಿನ ಅಸೆಯನ್ನೂ, ಹಣದ ಆಸೆಯನ್ನೂ ಬಿಟ್ಟೆ. ಲೋಕದಲ್ಲಿ ಯಶಸ್ಸಿನ ಆಸೆಯನ್ನೂ ಬಿಟ್ಟೆ. ನನ್ನಿಂದ ಎಲ್ಲ ಪ್ರಾಣಿಗಳಿಗೂ ಅಭಯವಿರಲಿ’ – ಎಂದು ಘೋಷಿಸಿ, ಜಲದಲ್ಲಿ ನಿಂತು ಯಜ್ಞೋಪವೀತವನ್ನೂ, ಶಿಖೆಯನ್ನೂ ವಿಸರ್ಜಿಸುತ್ತಾನೆ. ಸ್ನಾನ ಮಾಡಿ, ಕಾಷಾಯಾಂಬರ ಧರಿಸಿ, ಪರಿವ್ರಾಜಕನಾಗಿ ಹೊರಟುಬಿಡುತ್ತಾನೆ. ಸರ್ವಬಂಧನಮುಕ್ತನಾಗಿ ಲೋಕಕ್ಕೆ ಆಧ್ಯಾತ್ಮ ಜ್ಞಾನದಾನ ಮಾಡುತ್ತಾ ತಿರುಗಾಡುತ್ತಾನೆ.
ಕೊನೆಯದಾಗಿ ಅಂತ್ಯೇಷ್ಟಿ. ಮಾನವನು ಮೃತನಾದ ಮೇಲೆ, ಅವನ ಶವವನ್ನು ಆದಷ್ಟು ಬೇಗ ಪಂಚಭೂತಗಳಲ್ಲಿ ಲೀನ ಮಾಡಬೇಕು. ವೇದವು, ಭಸ್ಮಾಂತಂ ಶರೀರಮ್ || (ಯಜು.೪೦.೧೫.) – ಶರೀರ ಕೊನೆಯಾಗುವುದು ಬೂದಿಯಲ್ಲಿ – ಎನ್ನುತ್ತದೆ. ದಹನವೇ ವೈಜ್ಞಾನಿಕ ಕ್ರಮ. ಸರಿಯಾದ ಪ್ರಮಾಣದಲ್ಲಿ ತುಪ್ಪ-ಸಾಮಗ್ರಿಗಳನ್ನುಪಯೋಗಿಸಿದರೆ, ದುರ್ಗಂಧವೂ ಬರುವುದಿಲ್ಲ. ಅರ್ಥಗರ್ಭಿತ ವೇದಮಂತ್ರಗಳನ್ನುಚ್ಛರಿಸುತ್ತಾ ಚಿತಾಗ್ನಿಯಲ್ಲಿ ಆಹುತಿಗಳನ್ನು ಕೊಡಲಾಗುತ್ತದೆ. ಶವವೇನೋ ಮಂತ್ರಪಾಠದಿಂದ ಲಾಭ ಪಡೆಯಲಾರದು. ಆದರೆ, ಸ್ಮಶಾನದಲ್ಲಿ ಸೇರಿದ ಜನರ ಮನಸ್ಸಿನ ಮೇಲೆ ಜಗತ್ತಿನ ನಶ್ವರತೆಯ ರೂಪ ಚಿತ್ರಿತವಾಗಿ, ಆಧ್ಯಾತ್ಮಿಕ ಭಾವನೆಗಳು ಉದ್ಭವಿಸುತ್ತವೆ. ಉದಾಹರಣೆಗೆ ಇದೊಂದು ಮಂತ್ರವನ್ನು ನೋಡಬಹುದು.
ಸಂ ಗಚ್ಛಸ್ವ ಪಿತೃಭಿಃ ಸಂ ಯಮನೇಷ್ಟಾಪೂರ್ತೇನ ಪರಮೇ ವ್ಯೋಮನ್ |
ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾ ||
(ಋಕ್.೧೦.೧೪.೮.)
ಓ ಜೀವ! [ಪಿತೃಭಿಃ ಸಮ್] ನಿನ್ನನ್ನು ಪಾಲಿಸುವವರೊಂದಿಗೆ, [ಯಮೇನ ಸಮ್] ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, [ಇಷ್ಟಾಪೂರ್ತೇನ] ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, [ಪರಮೇ ವ್ಯೋಮನ್] ಪರಮರಕ್ಷಕನಾದ ಪ್ರಭುವಿನಲ್ಲಿ, [ಗಚ್ಛಸ್ವ] ಆಶ್ರಯ ಪಡೆದುಕೋ. [ಅವದ್ಯಂ ಹಿತ್ವಾಯ] ಕೆಟ್ಟದ್ದನ್ನು ಬಿಟ್ಟು, [ಪುನಃ ಅಸ್ತಮೇಹಿ] ಮತ್ತೆ ಮನೆಗೆ ಹೋಗು. [ಸುವರ್ಚಾಃ] ಸುವರ್ಚಸ್ವಿಯಾಗಿ, [ತನ್ವಾ ಸಂ ಗಚ್ಛಸ್ವ] ಶರೀರದೊಂದಿಗೆ ಮುಂದೆ ಸಾಗು, ಪ್ರಭುವಿಗೆ ಶರಣಾಗು, ಕೆಟ್ಟದ್ದನ್ನು ಬಿಡು. ನಶ್ವರ ಜಗತ್ತನ್ನು ನಂಬಿ ನೀನೇನು ಪಡೆದುಕೊಳ್ಳಬೇಕಾಗಿದೆ?
ಮೂರನೆಯ ದಿನ ಯಾರಾದರೂ ಅಸ್ಥಿಸಂಚಯ ಮಾಡಿ, ಎಲ್ಲಿಯಾದರೂ ಹೂತು ಬರಬೇಕು. ಅಲ್ಲಿಗೆ ಅಂತ್ಯೇಷ್ಟಿ ಕರ್ಮ ಮುಗಿಯಿತು. ಮೃತನಿಗೆ ಶ್ರಾದ್ಧಾದಿಗಳನ್ನು ಮಾಡುವುದು ಅವೈದಿಕವೆಂದು ಹಿಂದೆಯೇ ಹೇಳಿದ್ದೇವೆ.
ಈ ಹದಿನಾರು ವೈದಿಕ ಸಂಸ್ಕಾರಗಳೂ ಮಾನವನ ಮನಸ್ಸಿನ ಮೇಲೆ ಅದ್ಭುತ ಪ್ರಭಾವವನ್ನು ಬೀರುತ್ತವೆ.
-ಪಂ. ಸುಧಾಕರ ಚತುರ್ವೇದಿ.

Permanent link to this article: http://www.vedasudhe.com/2503/

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು – ೩

ಇದಾದ ಮೇಲೆ ನಡೆಯುವ ಹದಿಮೂರನೆಯ ಸಂಸ್ಕಾರ ವಿವಾಹ. ಬ್ರಹ್ಮಚರ್ಯದಿಂದ ಧೃಢಕಾಯರೂ, ಸದಾಚಾರಿಗಳೂ, ಸಕಲ ವಿದ್ಯಾವಂತರೂ ಆದ, ಕನಿಷ್ಠಪಕ್ಷ ೨೫ ವರ್ಷ ವಯಸ್ಸಾಗಿರುವ ಯುವಕ ಮತ್ತು ಕನಿಷ್ಠಪಕ್ಷ ೧೬ ವರ್ಷ ವಯಸ್ಸಾಗಿರುವ ಯುವತಿ ಒಂದೇ ಬಗೆಯ ಗುಣ-ಕರ್ಮ-ಸ್ವಭಾವವುಳ್ಳವರು, ಪರಸ್ಪರ ಒಪ್ಪಿಗೆಯಿಂದ ವಿವಾಹಿತರಾಗುತ್ತಾರೆ. ಇದು ಮಾನವಜೀವನದಲ್ಲಿ ಎರಡನೆಯ ಮಹತ್ವಪೂರ್ಣವಾದ ಘಟ್ಟ. ವಿವಾಹ ಸಂಸ್ಕಾರದ ಪ್ರತಿಯೊಂದು ಕ್ರಿಯೆಯೂ ಅತ್ಯಂತ ಅರ್ಥಗರ್ಭಿತವಾದುದು. ಎರಡು ಆತ್ಮಗಳು ತಮ್ಮ ಜೀವನದ ಭಿನ್ನತ್ವವನ್ನು ಕಳೆದುಕೊಂಡು, ಒಂದೇ ಸಂಯುಕ್ತಜೀವನವನ್ನು ರೂಪಿಸಿಕೊಳ್ಳುವ ಸಂಕಲ್ಪದಿಂದ ಹೇಳುತ್ತವೆ:-
ಸಮಂಜಂತು ವಿಶ್ವೇ ದೇವಾಃ ಸಮಾಪೋ ಹೃದಯಾನಿ ನೌ |
ಸಂ ಮಾತರಿಶ್ವಾ ಸಂ ಧಾತಾ ಸಮು ದೇಷ್ಟ್ರೀ ದಧಾತು ನೌ ||
(ಋಕ್.೧೦.೮೫.೪೭.)
[ವಿಶ್ವೇ ದೇವಾಃ] ಇಲ್ಲಿ ಸೇರಿರುವ ಸಮಸ್ತ ವಿದ್ವಾಂಸ-ವಿದುಷಿಯರೂ, [ಸಂ ಅಂಜಂತು] ಸ್ಪಷ್ಟವಾಗಿ ತಿಳಿಯಲಿ. [ನೌ ಹೃದಯಾನಿ] ನಮ್ಮ ಹೃದಯಗಳು, [ಆಪಃ ಸಮ್] ಜಲದೊಂದಿಗೆ ಬೆರೆತ ಜಲದಂತೆ ಒಂದಾಗಿವೆ. [ಮಾತರಿಶ್ವಾ] ಪ್ರಾಣಶಕ್ತಿಯೂ, [ಧಾತಾ] ಜಗದ್ಧಾರಕ, [ಉದೇಷ್ಟ್ರೀ] ವೇದಗಳ ಮೂಲಕ ಉಪದೇಶ ನೀಡುವವನೂ ಆದ ಪ್ರಭುವು, [ನೌ] ನಮ್ಮನ್ನು [ಸಂ ಸಂ ಸಮ್] ಚೆನ್ನಾಗಿ ಒಟ್ಟಿಗೆ ಕೂಡಿಸಿ, ಪ್ರೀತಿಯಿಂದ, [ದಧಾತು] ಸ್ಥಿರರನ್ನಾಗಿ ಮಾಡಲಿ. ಅನಂತರ ವರನು ವಧುವಿನ ಕೈ ಹಿಡಿದು, ಗಂಭೀರವಾಗಿ ಸಭ್ಯ ಗೃಹಸ್ಥರ ಮುಂದೆ ಈ ರೀತಿ ಹೇಳುತ್ತಿದ್ದಾನೆ:-
ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯಥಾಸಃ |
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ ||
(ಋಕ್.೧೦.೮೫.೩೬.)
[ಪತ್ಯಾ ಮಯಾ] ಪತಿಯಾದ ನನ್ನೊಂದಿಗೆ, [ಯಥಾ ಜರದಷ್ಟಿಃ ಆಸಃ] ನೀನು ಪೂರ್ಣ ವೃದ್ಧೆಯಾಗಲನುಕೂಲಿಸುವಂತೆ, [ಸೌಭಗತ್ವಾಯ] ಆಧ್ಯಾತ್ಮಿಕ, ಭೌತಿಕ ಸೌಭಾಗ್ಯ ಪ್ರಾಪ್ತಿಗಾಗಿ, [ತೇ ಹಸ್ತಂ ಗೃಭ್ಣಾಮಿ] ನಿನ್ನ ಕೈಯನ್ನು ಹಿಡಿಯುತ್ತೇನೆ. [ಭಗಃ ಅರ್ಯಮಾ ಸವಿತಾ ಪುರಂಧಿಃ] ತೇಜೋಮಯನೂ, ನ್ಯಾಯಕಾರಿಯೂ, ಜಗದುತ್ಪಾದಕನೂ, ಸರ್ವಾಧಾರನೂ ಆದ ಪ್ರಭುವೂ, [ದೇವಾಃ] ಇಲ್ಲಿ ನೆರೆದಿರುವ ಗುರು-ಹಿರಿಯರೂ, [ಗಾರ್ಹಪತ್ಯಾಯ] ಗೃಹಸ್ಥ ಧರ್ಮಪಾಲನೆಗಾಗಿ [ತ್ವಾ ಮಹ್ಯಂ ಅದುಃ] ನಿನ್ನನ್ನು ನನಗೆ ಕೊಟ್ಟಿದ್ದಾರೆ.
ಈ ರೀತಿ ತಾನು ಭಗವಂತನನ್ನೂ, ವಿವಾಹ ಮಂಟಪದಲ್ಲಿ ಸೇರಿರುವ ವಿದ್ವಾಂಸರನ್ನೂ ಸಾಕ್ಷಿಯಾಗಿಟ್ಟುಕೊಂಡು, ಕನ್ಯೆಯ ಕೈಹಿಡಿದಿರುವುದಾಗಿ ಹೇಳಿ, ‘ವೃದ್ಧೆಯಾಗುವವರೆಗೆ’ ಎಂಬ ಮಾತುಗಳಿಂದ, ತಾನು ದಾಂಪತ್ಯವಿಚ್ಛೇದನಕ್ಕೆ ಅವಕಾಶ ಕೊಡುವುದಿಲ್ಲವೆಂಬ ಭಾವನೆಯನ್ನು ವ್ಯಕ್ತಪಡಿಸುತ್ತಾನೆ. ಮುಂದೆ, ಪತ್ನೀ ತ್ವಮಸಿ ಧರ್ಮಣಾಹಂ ಗೃಹಪತಿಸ್ತವ || (ಅಥರ್ವ.೧೪.೧.೫೧.) – ನೀನು ಧರ್ಮದಿಂದ ನನ್ನ ಪತ್ನಿಯಾಗಿದ್ದೀಯೆ, ನಾನು ಧರ್ಮದಿಂದಲೇ ನಿನ್ನ ಗೃಹಪತಿಯಾಗಿದ್ದೇನೆ – ಎಂದು ಹೇಳಿ, ತಮ್ಮಿಬ್ಬರನ್ನೂ ಕಟ್ಟಿಹಾಕಿರುವುದು ಧರ್ಮವೇ ಹೊರತು ಕಾಮವಲ್ಲ ಎಂಬ ಭಾವನೆಯನ್ನು ಸೂಚಿಸುತ್ತಾನೆ. ಕೊನೆಗೆ, ನ ಸ್ತೇಯಮದ್ಮಿ ಮನಸೋದಮುಚ್ಯೇ || (ಅಥರ್ವ.೧೪.೧.೫೭.) – ನಾನು ನಿನಗೆ ಕಾಣದಂತೆ ಕಳ್ಳತನದಿಂದ ಯಾವ ಭೋಗವನ್ನೂ ಅನುಭವಿಸೆನು, ಮನದಿಂದ ಕಳ್ಳತನದ ಭಾವನೆಯನ್ನು ಕಿತ್ತು ಬಿಸಾಡುವೆನು – ಎಂದು ವಧುವಿಗೆ ಆಶ್ವಾಸನೆ ಕೊಡುತ್ತಾನೆ.
ವಧುವೂ ತನ್ನ ಸಂಪೂರ್ಣ ಜೀವನವನ್ನು ವರನಿಗೆ ಸಮರ್ಪಿಸಿರುವುದಾಗಿ ಘೋಷಿಸಿ,
ಇಯಂ ನಾರ್ಯುಪ ಬ್ರೂತೇ ಪೂಲ್ಯಾನ್ಯಾವಪಂತಿಕಾ |
ದೀರ್ಘಾಯುರಸ್ತು ಮೇ ಪತಿರ್ಜೀವಾತಿ ಶರದಃ ಶತಮ್ ||
(ಅಥರ್ವ.೧೪.೨.೬೩.)
[ಪೂಲ್ಯಾನಿ ಅವಪಂತಿಕಾ] ಅರಳಿನ ಆಹುತಿ ನೀಡುತ್ತಾ, [ಇಯಂ ನಾರೀ ಉಪಬ್ರೂತೇ] ಈ ನಾರಿ ಹೇಳುತ್ತಾಳೆ. [ಮೇ ಪತಿಃ ದೀರ್ಘಾಯುರಸ್ತು] ನನ್ನ ಪತಿ ದೀರ್ಘಾಯುವಾಗಲಿ. [ಶರದಃ ಶತಂ ಜೀವಾತಿ] ನೂರು ವರ್ಷಗಳ ಕಾಲ ಜೀವಿಸಲಿ – ಎಂದು ಪ್ರಾರ್ಥಿಸುತ್ತಾಳೆ. ಸಪ್ತಪದಿಯಲ್ಲಿ, ನಾವು ಆಜೀವನವೂ ಒಬ್ಬರಿಗೊಬ್ಬರು ಹೊಂದಿಕೊಂಡೇ ಜೀವನ ನಡೆಸುವೆವು ಎಂಬುದನ್ನು ಸೂಚಿಸಲು, ಜೊತೆಜೊತೆಯಲ್ಲಿ ಏಳು ಹೆಜ್ಜೆಗಳನ್ನಿಡುತ್ತಾರೆ. ದಂಪತಿಗಳು, ಒಬ್ಬರಿಗೊಬ್ಬರು ಸೌಮನಸ್ಯದಿಂದ ವರ್ತಿಸಬೇಕು ಎಂಬುದು ವೇದಗಳ ಆದೇಶವಾಗಿದೆ.
ಇಹೈವ ಸ್ತಂ ಮಾ ವಿ ಯೌಷ್ಟಂ ವಿಶ್ವಮಾಯುರ್ವ್ಯಶ್ನುತಮ್ |
ಕ್ರೀಡಂತೌ ಪುತ್ರೈರ್ನಪ್ರ್ಯಭಿರ್ಮೋದಮಾನೌ ಸ್ವೇ ಗೃಹೇ ||
(ಋಕ್.೧೦.೮೫.೪೨.)
ದಂಪತಿಗಳೇ! [ಇಹ ಏವ ಸ್ತಮ್] ಇಲ್ಲಿಯೇ ಇರಿ. [ಮಾ ವಿಯೌಷ್ಟಮ್] ಒಬ್ಬರನ್ನೊಬ್ಬರು ಅಗಲಬೇಡಿ. [ವಿಶ್ವಂ ಆಯುಃ ವ್ಯಶ್ನುತಮ್] ಪೂರ್ಣ ಆಯಸ್ಸನ್ನು ಅನುಭವಿಸಿರಿ. [ಪುತ್ರೈಃ ನಪ್ರ್ಯಭಿಃ] ಮಕ್ಕಳು-ಮೊಮ್ಮಕ್ಕಳೊಂದಿಗೆ [ಕ್ರೀಡಂತೌ] ಆಟವಾಡುತ್ತಾ [ಮೋದಮಾನೌ] ಹರ್ಷಿಸುತ್ತಾ [ಸ್ವೇ ಗೃಹೇ ಸ್ತಮ್] ನಿಮ್ಮ ಸ್ವಂತ ಮನೆಯಲ್ಲಿರಿ.

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%b7%e0%b3%8b%e0%b2%a1%e0%b2%b6-%e0%b2%b8%e0%b2%82%e0%b2%b8%e0%b3%8d-3/

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು – ೧

ಮಾನವನು ಸ್ವಭಾವತಃ ಪ್ರಭಾವಗ್ರಾಹಿ. ಬಾಹ್ಯ ಕ್ರಿಯಾಕಲಾಪಗಳ ಮತ್ತು ಆಚಾರ ವ್ಯವಹಾರಗಳ ನಿರ್ದಿಷ್ಟ ಪ್ರಭಾವ, ಅದು ಒಳ್ಳೆಯದೇ ಇರಬಹುದು, ಕೆಟ್ಟದ್ದೇ ಇರಬಹುದು, ಖಚಿತವಾಗಿ ಬಿದ್ದೇ ಬೀಳುತ್ತದೆ. ಈ ರೀತಿ ಬಿದ್ದ ಪ್ರಭಾವವನ್ನು “ಸಂಸ್ಕಾರ” ಎನ್ನುತ್ತಾರೆ. ಧರ್ಮದ ಪರಿಧಿಯಲ್ಲಿ ದುಷ್ಟ ಭಾವನೆಗಳಿಗೆ ಪ್ರವೇಶವೇ ಇಲ್ಲ. ಪ್ರಶ್ನೆ, ಕೇವಲ ಸತ್ ಪ್ರಭಾವಗಳದ್ದೇ ಇರುತ್ತದೆ. ಸಂಸ್ಕಾರ ಎಂಬ ಶಬ್ದಕ್ಕೆ ‘ಮನವನ್ನು ಹದಗೊಳಿಸುವುದು’ ಎಂಬ ಅರ್ಥವಿದೆ. ಮನಸ್ಸು ಹದಗೊಂಡರೆ, ಮಾತು-ಮೈಗಳೂ ಹದಗೊಂಡು, ಬಾಳುವೆಯೇ ಹಸನಾಗುವುದರಲ್ಲಿ ಸಂದೇಹವೇ ಇಲ್ಲ. ಈ ಮೂಲಭೂತ ಸಿದ್ಧಾಂತವನ್ನು ಮುಂದಿಟ್ಟುಕೊಂಡೇ ವೈದಿಕ ಧರ್ಮವು ಹದಿನಾರು ಸಂಸ್ಕಾರಗಳನ್ನು ವಿಧಿಸುತ್ತದೆ.
ಮೊದಲನೆಯದು ಗರ್ಭಾದಾನ. ವಿವಾಹಿತರಾದ ದಂಪತಿಗಳು ಪ್ರಥಮ ಬಾರಿ ದೇಹಸಂಗ ಮಾಡುವ ಮುನ್ನ ಆಚರಿಸಲ್ಪಡುವ ಸಂಸ್ಕಾರವಿದು. ದೇಹಸಂಗ ಕೇವಲ ಕಾಮಪಿಪಾಸಾ ತೃಪ್ತಿಗಾಗಿ ಮಾಡುವ ಪಾಶವಿಕ ಕರ್ಮವಲ್ಲ. ಭಗವಂತನನ್ನು ಸಾಕ್ಷಿಯಾಗಿಟ್ಟುಕೊಂಡು, ಪ್ರಜಾತಂತುವಿನ ಅವಿಚ್ಛೇದಕ್ಕಾಗಿ ಮಾಡುವ ಕರ್ತವ್ಯಕರ್ಮ – ಎಂಬಧಾರ್ಮಿಕ ಭಾವನೆಯನ್ನು ದಂಪತಿಗಳ ಚಿತ್ತದ ಮೇಲೆ ಮೂಡಿಸುವುದಕ್ಕಾಗಿ ಮಾಡುವ ಸಂಸ್ಕಾರವಿದು. ಹೋಮದ ಪ್ರಧಾನ ಮಂತ್ರಗಳಲ್ಲಿ ಪತಿಯು – ‘ದೇವ ದೇವ! ನಾನು ನಿನ್ನನ್ನೇ ನಮ್ಮ ಜೀವನದ ಸ್ವಾಮಿಯಾಗಿ ಆರಿಸಿದ್ದೇನೆ. ನನ್ನ ಮತ್ತು ಈಕೆಯ ಶರೀರದಲ್ಲಿರಬಹುದಾದ ನಾನಾ ವಿಕಾರಗಳನ್ನು ದೂರೀಕರಿಸು’ – ಎಂದು ಬೇಡಿಕೊಳ್ಳುತ್ತಾನೆ.
ಎರಡನೆಯದಾದ ಪುಂಸವನವು ಗರ್ಭಿಣಿಯ ಶಕ್ತಿಯನ್ನು ಹೆಚ್ಚಿಸುವುದಕ್ಕೂ, ಮೂರನೆಯದಾದ ಸೀಮಂತೋನ್ನಯನವೂ ಆಕೆಯ ಮನಸ್ಸು ಉಲ್ಲಾಸಪೂರ್ಣವಾಗಿ ಇರುವುದಕ್ಕಾಗಿ ಆಚರಿಸಲ್ಪಡುತ್ತದೆ. ಇವೆರಡರಿಂದಲೂ ಗರ್ಭಸ್ಥ ಶಿಶುವಿನ ಮೇಲೆ ಉತ್ತಮ ಸಂಸ್ಕಾರ ಬೀಳುವುದರಲ್ಲಿ ಸಂದೇಹವೇ ಇಲ್ಲ.
ನಾಲ್ಕನೆಯದಾದ ಜಾತಕರ್ಮವು ಶಿಶು ಜನನವಾದಾಗ ಮಾಡಲ್ಪಡುತ್ತದೆ. ವಿಶೇಷ ಹೋಮವಾದ ಮೇಲೆ, ತಂದೆ ಬೆಳ್ಳಿ ಅಥವಾ ಚಿನ್ನದ ಸರಳನ್ನು ಜೇನುತುಪ್ಪದಲ್ಲಿ ಅದ್ದಿ, ಮಗುವಿನ ನಾಲಿಗೆಯ ಮೇಲೆ ‘ಓಂ’ ಎಂದು ಬರೆಯುತ್ತಾನೆ, ಕಿವಿಗಳಲ್ಲಿ ‘ವೇದೋsಸಿ’ -ನೀನು ಜ್ಞಾನಮಯ- ಎಂದು ಉಚ್ಚರಿಸುತ್ತಾನೆ. ಆ ಕೂಡಲೇ ಆ ಮಗುವು ಈ ಕ್ರಿಯೆಗಳ ಅರ್ಥವನ್ನು ಗ್ರಹಿಸಲಾರದಾದರೂ, ತಂದೆ-ತಾಯಿಗಳು ‘ತಮ್ಮ ಶಿಶುವಿನ ಬಾಯಿಂದ ಸಿಹಿಯಾದ ಮಾತುಗಳೇ ಹೊರಡಲಿ, ಭಗವನ್ನಾಮ ಶಿಶುವಿನ ನಾಲಿಗೆಯ ಮೇಲೆ ಸುಳಿಯಲಿ, ಅದು ಜ್ಞಾನಿಯಾಗಿ ಬೆಳೆಯಲಿ’ ಎಂಬ ಪವಿತ್ರ ಸಂಕಲ್ಪವನ್ನು ಹೊತ್ತು, ಅದೇ ರೀತಿ ಅದನ್ನು ಬೆಳೆಸುವ ಯತ್ನ ಮಾಡಬೇಕು.
ಐದನೆಯ ಸಂಸ್ಕಾರ ನಾಮಕರಣ. ಮಗುವು ಹನ್ನೊಂದು ದಿನಗಳದ್ದು, ೧೦೧ ದಿನಗಳದ್ದು ಅಥವಾ ಒಂದು ವರ್ಷವಾದದ್ದಾದಾಗ ವಿಶೇಷ ಹೋಮ ಮಾಡಿ ಮಗುವಿಗೆ ಹೆಸರಿಡಲಾಗುತ್ತದೆ. ವೈದಿಕ ಧರ್ಮದಲ್ಲಿ ಹೆಸರು, ವ್ಯಾವರ್ತನ, ನಿರ್ದೇಶನ ಮತ್ತು ಆದರ್ಶನ, ಎಂದರೆ, ಬೇರೆಯವರಿಂದ ಬೇರ್ಪಡಿಸುವುದು, ಇಂತಹವನೇ ಎಂದು ಗುರುತಿಸುವುದು ಮತ್ತು ಉನ್ನತವಾದ ಗುರಿಯನ್ನಿಡುವುದು, ಈ ಮೂರೂ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ಇಡಲ್ಪಡುತ್ತದೆ. ‘ಹೆಸರಿನಲ್ಲೇನಿದೆ?’ ಎಂಬ ಹಗುರವಾದ ಪ್ರಶ್ನೆಗೆ ವೈದಿಕ ಧರ್ಮದಲ್ಲಿ ಅವಕಾಶವಿಲ್ಲ. ಹೆಸರನ್ನಿಡುವಾಗ, ತಂದೆ ಈ ಮಂತ್ರವನ್ನುಚ್ಚರಿಸುತ್ತಾನೆ:-
ಕೋsಸಿ ಕತಮೋsಸಿ ಕಸ್ಯಾಸಿ ಕೋ ನಾಮಾಸಿ || (ಯಜು.೭.೨೯.)
ಓ ಶಿಶೋ, [ಕಃ ಅಸಿ] ನೀನು ಸುಖಮಯನಾಗಿದ್ದೀಯೆ. [ಕತಮಃ ಅಸಿ] ಅತ್ಯಂತ ಸುಖ ಸ್ವರೂಪನಾಗಿದ್ದೀಯ. [ಕಸ್ಯ ಅಸಿ] ನೀನು ಸುಖ ಸ್ವರೂಪನಾದ ಪ್ರಭುವಿನ ಕಂದನಾಗಿದ್ದೀಯೆ. [ಕಃ ನಾಮ ಅಸಿ] ಸುಖ ಎಂಬುದೇ ನಿನ್ನ ಹೆಸರಾಗಿದೆ.
ಈ ಕಾಮನೆಯಿಂದ ಮಗುವನ್ನು ಬೆಳೆಸುವುದು ಮಾತಾ-ಪಿತೃಗಳ ಉತ್ತರದಾಯಿತ್ವ.
ಆರನೆಯದು ನಿಷ್ಕ್ರಮಣ ಸಂಸ್ಕಾರ. ಮಗುವಿಗೆ ನಾಲ್ಕು ತಿಂಗಳಾದಾಗ ಮೊದಲ ಸಾರಿ ಅದನ್ನು ಮನೆಯ ಹೊರಗಡೆ ಕರೆದುಕೊಂಡು ಹೋಗಲಾಗುತ್ತದೆ. ‘ಪುತ್ರ ಅಥವಾ ಪುತ್ರಿ, ನೀನು ನೋಡುತ್ತಿರುವ ಸೂರ್ಯನಂತೆಯೇ ನೀನು ಪ್ರಕಾಶಪುಂಜನಾಗು. ಧೀರ-ವೀರತನದಿಂದ ದೀರ್ಘಾಯುವಾಗಿ ಬಾಳು’ – ಎಂಬರ್ಥದ ಮಂತ್ರವನ್ನುಚ್ಚರಿಸುತ್ತಾನೆ.
ಏಳನೆಯದು ಅನ್ನಪ್ರಾಶನ ಸಂಸ್ಕಾರ. ಮಗುವಿಗೆ ಅನ್ನವನ್ನು ಅರಗಿಸಿಕೊಳ್ಳುವ ಶಕ್ತಿ ಬಂದಾಗ, ವಿಶೇಷ ಹೋಮವನ್ನು ಮಾಡಿ, ಮಗುವಿಗೆ ಮೃದುವೂ, ರುಚಿಕರವೂ ಆದ ಅನ್ನವನ್ನೇ ತಿನ್ನಿಸಲಾಗುತ್ತದೆ, ಆಗ ಹೇಳುವ ಮಂತ್ರ ಸಂಪೂರ್ಣ ಜೀವನಕ್ಕೇ ಆಹಾರದ ಆದರ್ಶವನ್ನು ಮಂಡಿಸುತ್ತದೆ:-
ಅನ್ನಪತೇsನ್ನಸ್ಯ ನೋ ದೇಹ್ಯನಮೀವಸ್ಯ ಶುಷ್ಮಿಣಃ |
ಪ್ರ ಪ್ರ ದಾತಾರಂ ತಾರಿಷ ಊರ್ಜಂ ನೋ ಧೇಹಿ ದ್ವಿಪದೇ ಚತುಷ್ಪದೇ || (ಯಜು.೧೧.೮೩.)
[ಅನ್ನಪತೇ] ಆಹಾರದ ಸ್ವಾಮಿಯೇ, [ನಃ] ನಮಗೆ [ಅನಮೀವಸ್ಯ] ರೋಗರಹಿತವೂ, [ಶುಷ್ಮಿಣಃ] ಬಲಪ್ರದವೂ ಆದ [ಅನ್ನಸ್ಯ] ಅನ್ನದ ಭಾಗವನ್ನು [ದೇಹಿ] ಕೊಡು. [ಪ್ರ ದಾತಾರಮ್] ಅನ್ನವನ್ನೊದಗಿಸುವ ಕೃಷಿಕಾರನನ್ನು [ಪ್ರ ತಾರಿಷ] ಕಷ್ಟದಿಂದ ಪಾರು ಮಾಡು. [ನಃ ದ್ವಿಪದೇ ಚತುಷ್ಪದೇ] ನಮ್ಮ ದ್ವಿಪಾದ, ಚತುಷ್ಪಾದ ಜೀವರಿಗೆ [ಊರ್ಜಂ ಧೇಹಿ] ಶಕ್ತಿಯನ್ನು ಕರುಣಿಸು.
ಜೀವನಪೂರ್ತಿ ಇಂತಹ ರೋಗ ತಾರದ, ಬಲದಾಯಕವಾದ, ಯಾವ ಜೀವಕ್ಕೂ ನೋವನ್ನು ತಾರದ ಆಹಾರವನ್ನೇ ಸೇವಿಸಬೇಕು.
-ಪಂ. ಸುಧಾಕರ ಚತುರ್ವೇದಿ.

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%b7%e0%b3%8b%e0%b2%a1%e0%b2%b6-%e0%b2%b8%e0%b2%82%e0%b2%b8%e0%b3%8d/

ವೇದಾಧ್ಯಾಯೀ ಶ್ರೀ ಸುಧಾಕರ ಶರ್ಮರಿಂದ ಯುಗಾದಿ ಸಂದೇಶ

ಈ ಪ್ಲೆಯರ್ ಸರಿಯಾಗಿ ಕೆಲಸ ಮಾಡದಿದ್ದರೆ ಫೋಟೋ ಕೆಳಗೆ ಇನ್ನೊಂದು ಪ್ಲೆಯರ್ ಇದೆ

 

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b2%be%e0%b2%a7%e0%b3%8d%e0%b2%af%e0%b2%be%e0%b2%af%e0%b3%80-%e0%b2%b6%e0%b3%8d%e0%b2%b0%e0%b3%80-%e0%b2%b8%e0%b3%81%e0%b2%a7%e0%b2%be%e0%b2%95%e0%b2%b0-%e0%b2%b6-5/

ವೇದೋಕ್ತ ಜೀವನ ಪಥ: ಷೋಡಶ ಸಂಸ್ಕಾರಗಳು – ೨

ಎಂಟನೆಯದು ಚೂಡಾಕರ್ಮ. ಹುಟ್ಟಿನಿಂದ ಬಂದ ತಲೆಕೂದಲು ಆರೋಗ್ಯಕರವಲ್ಲ. ಅದನ್ನು ತೆಗೆದುಬಿಟ್ಟರೆ, ಮಗು ನಾನಾ ರೋಗಗಳ ಆಕ್ರಮಣಕ್ಕೆ ಗುರಿಯಾಗುವುದು ತಪ್ಪುತ್ತದೆ. ಮತ್ತೆ ಬೆಳೆಯುವ ಕೂದಲು ಪುಷ್ಕಳವಾಗಿಯೂ ಸುಂದರವಾಗಿಯೂ ಇರುತ್ತದೆ. ಈ ಸಂಸ್ಕಾರದಲ್ಲಿಯೂ ವಿಶೇಷ ಹೋಮ ಮಾಡಿ, ‘ಮಗು ದೀರ್ಘಾಯುವೂ, ಕೀರ್ತಿಶಾಲಿಯೂ ಆಗಲಿ’ – ಎಂಬ ಪ್ರಾರ್ಥನೆ ಸಲ್ಲಿಸಲ್ಪಡುತ್ತದೆ.
ಒಂಬತ್ತನೆಯ ಸಂಸ್ಕಾರ ಕರ್ಣವೇಧ. ಮಗುವಿನ ಕಿವಿಗಳನ್ನು ಯುಕ್ತವಾದ ಸ್ಥಳದಲ್ಲಿ ಚುಚ್ಚಲಾಗುತ್ತದೆ. ಇದರಿಂದ ಅಂತ್ರವೃದ್ಧಿರೋಗವು ಬರುವ ಅವಕಾಶ ತಪ್ಪುತ್ತದೆ. ಒಡವೆ ಹಾಕುವುದರಿಂದ ಮಗುವಿನ ಸೌಂದರ್ಯವೂ ಹೆಚ್ಚುತ್ತದೆ. ಈ ಸಂಸ್ಕಾರದಲ್ಲಿಯೂ ಹೋಮ ಮಾಡಿ ‘ಶಿಶುವಿನ ಕಿವಿಗಳ ಮೇಲೆ ಒಳ್ಳೆಯ ಮಾತುಗಳೇ ಬೀಳಲಿ’ – ಎಂದು ಪ್ರಾರ್ಥಿಸಿಕೊಳ್ಳಲಾಗುತ್ತದೆ.
ಹತ್ತನೆಯ ಸಂಸ್ಕಾರ ಮಾನವ ಜೀವನದಲ್ಲಿ ಒಂದು ಹೊಸ ಘಟ್ಟವನ್ನು ಪ್ರಾರಂಭಿಸುತ್ತದೆ. ಅದನ್ನು ಉಪನಯನ ಸಂಸ್ಕಾರ ಎನ್ನುವುದೂ ಉಂಟು. ಆಚಾರ್ಯನು ಗರ್ಭಾಷ್ಟಮ ಅಂದರೆ, ಎಂಟು ವರ್ಷದ ಬಾಲಕ ಅಥವಾ ಬಾಲಿಕೆಗೆ, ಮಂತ್ರಪೂರ್ವಕವಾಗಿ ಮೂರೆಳೆಯ ಯಜ್ಞೋಪವೀತವನ್ನು ಧಾರಣೆ ಮಾಡಿಸುತ್ತಾನೆ. ಆ ಮಂತ್ರದಲ್ಲಿ, ‘ಯಜ್ಞೋಪವೀತ, ಸತ್ಕರ್ಮಗಳೊಂದಿಗೇ ಉದ್ಣವಿಸುವಂತಹದು. ಮೂರು ಎಳೆಗಳು ಮನಃಶುದ್ಧಿ, ವಚಃಶುದ್ಧಿ, ಕಾಯಶುದ್ಧಿ – ಈ ಮೂರು ಪವಿತ್ರತೆಗಳನ್ನು ಸೂಚಿಸುತ್ತವೆ. ಶುಭ್ರವೂ, ಗತಿಶೀಲವೂ ಆದ ಜೀವನ ನಡೆಸು’ – ಎಂದು ಹೇಳುತ್ತದೆ. ಸಂಸ್ಕಾರದೊಂದಿಗೇ ಬಾಲಕ-ಬಾಲಿಕೆಯರ ಧಾರ್ಮಿಕ ಜೀವನ ಪ್ರಾರಂಭವಾಗುತ್ತದೆ. ವಿಶೇಷ ಹವನ ಮಾಡಿ, ಬಾಲಕ-ಬಾಲಿಕೆ, “ಅನೃತಾತ್ ಸತ್ಯಮುಪೈ”|| (ಯಜು.೧.೫.) – ಅಸತ್ಯದಿಂದ ಸರಿದು ಸತ್ಯದ ಕಡೆಗೆ ಅಡಿಯಿಡುತ್ತೇನೆ – ಎಂಬ ಮಹಾವ್ರತವನ್ನು ಸ್ವೀಕರಿಸುತ್ತಾರೆ. ‘ಉಪನಯನ’ ಎಂದರೆ, ಹತ್ತಿರ ಕರೆದುಕೊಳ್ಳುವುದು ಎಂದರ್ಥ. ಆಚಾರ್ಯ, ಈ ಸಂಸ್ಕಾರ ನೀಡಿ, ಬಾಲಕ-ಬಾಲಿಕೆಯರನ್ನು ಶಿಕ್ಷಣಕ್ಕಾಗಿ ತನ್ನ ಬಳಿ ಕರೆದುಕೊಳ್ಳುತ್ತಾನೆ.
ಇದಾದ ಕೂಡಲೇ ಹನ್ನೊಂದನೆಯ ಸಂಸ್ಕಾರ ವೇದಾರಂಭ ಮಾಡಲ್ಪಡುತ್ತದೆ. ಇದು ಅದ್ಯಯನದ ಉದ್ಘಾಟನಾ ಸಮಾರಂಭ ಎನ್ನಬಹುದು. ಈ ಸಂಸ್ಕಾರದಲ್ಲಿಯೇ ಆಚಾರ್ಯನು ಶಿಷ್ಯ-ಶಿಷ್ಯೆಯರಿಗೆ, ಜಗತ್ತಿನ ಪ್ರಾರ್ಥನೆಗಳಲ್ಲೆಲ್ಲಾ ಅತ್ಯಂತ ಉತ್ಕೃಷ್ಟವಾದ, ಸರ್ವಥಾ ಅನುಪಮವಾದ, ಸಾರ್ವಭೌಮ ಹಾಗೂ ಸಾರ್ವಕಾಲಿಕವಾದ, ಅದ್ಭುತ ಗಾಯತ್ರೀ ಮಂತ್ರವನ್ನು ಉಪದೇಶಿಸುತ್ತಾನೆ. ವೈದಿಕ ದರ್ಮದ ಸೌಂದರ್ಯವಾದ ಗಾಯತ್ರೀ ಮಂತ್ರವಿದು:
ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ || (ಯಜು. ೩೬.೩.)
ಪರಮಾತ್ಮನು, [ಓಮ್] ಸರ್ವರಕ್ಷಕನು, [ಭೂಃ] ಪ್ರಾಣಸ್ವರೂಪನು, [ಭುವಃ] ದುಃಖ ನಿವಾರಕನು, [ಸ್ವಃ] ಆನಂದಸ್ವರೂಪನು. [ಸವಿತುಃ ದೇವಸ್ಯ] ಸರ್ವ ಜಗದುತ್ಪಾದಕನೂ, ಪ್ರೇರಕನೂ ಆದ ಆ ಸರ್ವದಾತೃ ಜ್ಯೋತಿರ್ಮಯನ, [ತತ್ ವರೇಣ್ಯಂ ಭರ್ಗಃ] ಆ ಸ್ವೀಕರಿಸಲರ್ಹವಾದ ಪಾಪದಾಹಕ ಜ್ಯೋತಿಯನ್ನು, [ಧೀಮಹಿ] ಧ್ಯಾನಿಸೋಣ, ಧರಿಸೋಣ. [ಯಃ] ಯಾವ ಆ ಪ್ರಭುವು, [ನಃ ಧಿಯಃ] ನಮ್ಮ ಬುದ್ಧಿಯನ್ನು ಉತ್ತಮ ಕರ್ಮಗಳತ್ತ, [ಪ್ರಚೋದಯಾತ್] ಪ್ರೇರೇಪಿಸಲಿ.
ಈ ವಿಚಿತ್ರ ಪ್ರಾರ್ಥನೆ ಕ್ರಿಯಾರೂಪಕ್ಕಿಳಿದು ಬಂದಲ್ಲಿ, ಬುದ್ಧಿ ಶುದ್ಧಿ ಸಿದ್ಧಿಸಿದಲ್ಲಿ ನಮಗೆ ಸಿಕ್ಕದಿರುವ ವಸ್ತುವಾದರೂ ಯಾವುದು ಉಳಿದೀತು?
ಈ ಸಂಸ್ಕಾರವಾದ ಮೇಲೆ ಬಾಲಕ-ಬಾಲಿಕೆಯರು ವಿದ್ಯಾಭ್ಯಾಸವನ್ನಾರಂಭಿಸಿ ಬ್ರಹ್ಮಚರ್ಯಪೂರ್ವಕವಾಗಿ ಸಾಧನಾಮಯವಾದ ಜೀವನವನ್ನು ನಿರ್ವಹಿಸುತ್ತಾ ಸಮಸ್ತ ವಿದ್ಯೆಗಳನ್ನು ಕಲಿಯುತ್ತಾರೆ.
ವಿದ್ಯಾಭ್ಯಾಸ ಪೂರ್ಣವಾದ ಮೇಲೆ, ಹನ್ನೆರಡನೆಯದಾದ ಸಮಾವರ್ತನ ಸಂಸ್ಕಾರ ನಡೆಯುತ್ತದೆ. ವಿಶಿಷ್ಟ ಹೋಮಾನಂತರ ಯುವಕ-ಯುವತಿಯರು ಎಂಟು ಕುಂಭಗಳಲ್ಲಿಟ್ಟ ನೀರಿನಿಂದ ಸ್ನಾನ ಮಾಡುತ್ತಾರೆ. ಎಂಟು ದಿಕ್ಕಿನಲ್ಲಿ ಎಲ್ಲೇ ಹೋದರೂ, ಜಲದ ಶಾಂತಿಯನ್ನೂ, ಪವಿತ್ರತೆಯನ್ನೂ ಪ್ರಸರಿಸುತ್ತೇವೆ ಎಂಬ ಸಂಕಲ್ಪವೇ ಈ ಸಂಸ್ಕಾರದ ರಹಸ್ಯ. ಈ ಸ್ನಾನವಾದ ಮೇಲೆ ಅವರು ‘ಸ್ನಾತಕ’ರು ಅಥವಾ ‘ಸ್ನಾತಿಕೆ’ಯರು ಎನ್ನಿಸಿಕೊಳ್ಳುತ್ತಾರೆ. ಇಲ್ಲಿಗೆ ಬ್ರಹ್ಮಚರ್ಯಾಶ್ರಮ ಸಮಾಪ್ತವಾಗುತ್ತದೆ.
-ಪಂ. ಸುಧಾಕರ ಚತುರ್ವೇದಿ.
*******************

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%b7%e0%b3%8b%e0%b2%a1%e0%b2%b6-%e0%b2%b8%e0%b2%82%e0%b2%b8%e0%b3%8d-2/

ಕುಸುಮ-2

 

“ಎಲ್ಲರಿಗಾಗಿ ವೇದ”

[11.11.2012 ರಂದು ಜನಮಿತ್ರ ಪತ್ರಿಕೆಯಲ್ಲಿ ಪ್ರಕಟವಾಗಿದೆ]

 

ವೇದದ ಉಗಮ:

ವೇದದ ಉಗಮವನ್ನು ಒಂದು ವೇದ ಮಂತ್ರವೇ ನಿರೂಪಿಸುತ್ತದೆ… ಯಜುರ್ವೇದದ 31 ನೇ ಅಧ್ಯಾಯದ 7ನೇ ಮಂತ್ರ ಹೀಗಿದೆ…

 

ತಸ್ಮಾತ್  ಯಜ್ಞಾತ್ ಸರ್ವಹುತ: ಋಚ: ಸಾಮಾನಿ  ಜಜ್ಞಿರೇ|

ಛಂದಾಂಸಿ ಜಜ್ಞಿರೇ ತಸ್ಮಾತ್ ಯಜುಸ್ತಸ್ಮಾದಜಾಯತಾ||

 

ತಸ್ಮಾತ್  ಸರ್ವಹುತ: ಯಜ್ಞಾತ್= ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ

ಋಚ: ಸಾಮಾನಿ  ಜಜ್ಞಿರೇ= ಋಗ್ವೇದ ಸಾಮವೇದಗಳು ಪ್ರಕಟವಾದವು

ತಸ್ಮಾತ್ ಛಂದಾಂಸಿ ಜಜ್ಞಿರೇ =ಅವನಿಂದ ಅಥರ್ವಮಂತ್ರಗಳೂ ಪ್ರಕಟವಾದವು.

ತಸ್ಮಾತ್ ಯಜು: ಅಜಾಯತ= ಅವನಿಂದ ಯಜುರ್ವೇದವೂ ಪ್ರಕಟವಾಯ್ತು.

 

ಭಗವಂತನಿಂದಲೇ ನಾಲ್ಕೂ ವೇದಗಳೂ ಪ್ರಕಟವಾದವು, ಎಂಬ ಅಂಶವನ್ನು ಯಜುರ್ವೇದದ ಈ ಮಂತ್ರವು ಸ್ಪಷ್ಟಪಡಿಸುತ್ತದೆ. ಅಂದರೆ ನಾಲ್ಕೂ ವೇದಗಳು ಯಾವ ಮನುಷ್ಯನೂ ಬರೆದಿದ್ದಲ್ಲ. ಅದಾಗಲೇ ತರಂಗಗಳ    ರೂಪದಲ್ಲಿ ಪ್ರಕಟವಾಗಿದ್ದ  ವೇದ ಮಂತ್ರಗಳನ್ನು ಅನೇಕ ಋಷಿಗಳು ತಮ್ಮ ತಪೋಬಲದಿಂದ ಕಂಡುಕೊಂಡು     ಮಂತ್ರದ್ರಷ್ಟಾರರೆನಿಸಿದರು. ಇದರಿಂದ ಏನು ನಿರೂಪಿತವಾಗುತ್ತದೆಂದರೆ ಮಾನವನ ಸೃಷ್ಟಿಯಾದಾಗಲೇ ಅವನ ಬದುಕನ್ನು ರೂಪಿಸುವ ಸೂತ್ರಗಳಾದ ವೇದಮಂತ್ರಗಳು ಭಗವಂತನಿಂದ ಪ್ರಕಟವಾಗಿದ್ದವು.ನಂತರದ ದಿನಗಳಲ್ಲಿ ಋಷಿಗಳಿಗೆ ಮಂತ್ರಗಳ ದರ್ಶನವಾಯ್ತೆಂಬುದು ವೇದಗಳಿಂದಲೇ ತಿಳಿದುಬರುವ ಸಂಗತಿ.

ವೇದವು ಯಾರಿಗಾಗಿ?

ಜ್ಞಾನ ಬೇಕೆನ್ನುವ ಎಲ್ಲರಿಗಾಗಿ ವೇದವನ್ನು ಕೊ ಟ್ಟಿದ್ದೇನೆ, ಎಂಬುದು     ಭಗವಂತನ ಮಾತು. ಯಜುರ್ವೇದದ 26 ನೇ ಅಧ್ಯಾಯದ 2ನೇ ಮಂತ್ರ ಹೀಗಿದೆ…

 

ಯಥೇಮಾಂ ವಾಚಂ ಕಾಲ್ಯಾಣೀಂ ಆವದಾನಿ ಜನೇಭ್ಯ: |

ಬ್ರಹ್ಮರಾಜನ್ಯಾಭ್ಯಾಂ ಶೂದ್ರಾಯಚಾರ್ಯಾಯ ಚ ಸ್ವಾಯ ಚಾರಣಾಯ ಚ |

ಪ್ರಿಯೋ ದೇವಾನಾಂ ದಕ್ಷಿಣಾಯೈ ದಾತುರಿಹ ಭೂಯಾ ಸಮಯಂ

ಮೇ ಕಾಮ: ಸಮೃಧ್ಯತಾಮುಪ ಮಾದೋ ನಮತು||

 

ಅರ್ಥ:

ಇಹ= ಈ ಲೋಕದಲ್ಲಿ

ಯಥಾ ದೇವಾನಾಂ ದಕ್ಷಿಣಾಯೈದಾತು: ಭೂಯಾಸಮ್= ವಿದ್ವಜ್ಜನರಿಗೂ, ಉದಾರಾತ್ಮರಿಗೂ,ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ

ಇಮಾಂ ಕಲ್ಯಾಣೀಂ  ವಾಚಮ್ = ಈ ಕಲ್ಯಾಣಕಾರಿಯಾದ ವಾಣಿಯನ್ನು

ಜನೇಭ್ಯ: =ಮಾನವರೆಲ್ಲರ ಸಲುವಾಗಿ

ಬ್ರಹ್ಮರಾಜನ್ಯಾಭ್ಯಾಮ್=ಬ್ರಾಹ್ಮಣ-ಕ್ಷತ್ರಿಯರಿಗಾಗಿ

ಶೂದ್ರಾಯ=ಶೂದ್ರನಿಗಾಗಿ  ಚ=ಮತ್ತು

ಆರ್ಯಾಯ= ವೈಶ್ಯನ ಸಲುವಾಗಿ

ಸ್ವಾಯ=ತನ್ನವನಿಗಾಗಿ

 ಚ=ಮತ್ತು[ಅದೇ ರೀತಿಯಲ್ಲಿ]

ಅರಣಾಯ=ಬೇರೆಯವನಿಗಾಗಿ

ಆವದಾನಿ=ಉಪದೇಶಿಸುತ್ತೇನೆ.

ಅಯಂ ಮೇ ಕಾಮ:= ಈ ನನ್ನ ಕಾಮನೆಯು

ಸಮೃಧ್ಯತಾಮ್=ಸಮೃದ್ಧವಾಗಲಿ

ಅದ: = ಈ ಜಗತ್ತು

ಮಾ ಉಪ ನಮತು=ನನ್ನ ಬಳಿ ನಮ್ರವಾಗಿ ಬರಲಿ

 

ಭಾವಾರ್ಥ:

ಈ ಮಂತ್ರವು ಏನು ಹೇಳುತ್ತದೆ? ಈ ಲೋಕದಲ್ಲಿನ ಮಾನವರೆಲ್ಲರ ಸಲುವಾಗಿ ಉಪದೇಶಿಸುತ್ತೇನೆ. ಮಂತ್ರದಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಪದಗಳನ್ನು ಈಗಿರುವಂತೆ ಜಾತಿವಾಚಕವಾಗಿ ಬಳಸಿಲ್ಲವೆಂಬುದನ್ನು ಗಮನಿಸಬೇಕು. ಮುಂದೆ ನಾಲ್ಕು ವರ್ಣಗಳ ಪರಿಚಯವಾಗುವಾಗ  ಈ ವಿಚಾರವು ಸ್ಪಷ್ಟವಾಗುತ್ತದೆ.ಜಗತ್ತಿನ ನೆಮ್ಮದಿಗಾಗಿ ಎಲ್ಲರಿಗೆ ಎನ್ನುವಾಗ, ತನ್ನವನಿಗೆ, ಅಷ್ಟೇ ಅಲ್ಲ, ಬೇರೆಯವನಿಗೂ ಉಪದೇಶಿಸುತ್ತೇನೆ” ಎಂಬುದು ಭಗವಂತನ ಮಾತುಗಳು.ಆದ್ದರಿಂದ ವೇದವನ್ನು ಯಾವುದೇ ಒಂದು ಗುಂಪಿಗೆ ಮಾತ್ರ ಎಂದು ತಿಳಿಯಬಾರದು, ಅಷ್ಟೇ ಅಲ್ಲ ವೇದವು ಎಲ್ಲಾ ಮಾನವರಿಗಾಗಿ, ಎಂಬುದನ್ನು ಮುಂದೆ ಹಲವಾರು ಮಂತ್ರಗಳಲ್ಲಿ ಕಾಣಬಹುದು. ಅಷ್ಟೇ ಅಲ್ಲ ಅಪೇಕ್ಷೆ ಪಡುವ ಯಾರಿಗೇ ಆಗಲೀ ವೇದಬಲ್ಲವನು ವೇದವನ್ನು ಹೇಳಿಕೊಡದಿದ್ದರೆ ವೇದಬಲ್ಲವನು ತನ್ನ ಸಂಪತ್ತಿನೊಡನೆ ಮಾರಿಕೊಂಡು ಹೋಗುತ್ತಾನೆಂಬುದನ್ನೂ ಸಹ ಮುಂದಿನ ವೇದಮಂತ್ರದಲ್ಲಿ ನೋಡ   ಬಹುದಾಗಿದೆ. 

Permanent link to this article: http://www.vedasudhe.com/%e0%b2%95%e0%b3%81%e0%b2%b8%e0%b3%81%e0%b2%ae-2/

Older posts «